ಪ್ರೇಮಿಗಳ ದಿನದಂದು ರೆಸ್ಟೋರೆಂಟ್, ಮಾಲ್‍ ನಲ್ಲಿ ಬಜರಂಗದಳ ಕಾರ್ಯಕರ್ತರಿಂದ ದಾಂಧಲೆ: ಆರೋಪ

Update: 2020-02-15 11:04 GMT

ಹೈದರಾಬಾದ್: ಪ್ರೇಮಿಗಳ ದಿನದಂದು ಬಜರಂಗದಳ ಕಾರ್ಯಕರ್ತರು ಹೈದರಾಬಾದ್‍ ನ ಐಟಿ ಪ್ರದೇಶ ಕೊಂಡಾಪುರ್ ಎಂಬಲ್ಲಿನ ರೆಸ್ಟೋರೆಂಟ್ ಹಾಗೂ ಮಾಲ್‍ ನಲ್ಲಿ ದಾಂಧಲೆಗೈದಿದೆ ಎಂದು ಆರೋಪಿಸಲಾಗಿದೆ.

ಈ ಘಟನೆ ಕುರಿತಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಕೇಸರಿ ಶಾಲುಧಾರಿಗಳು `ಬಂದ್ ಕರೋ ಬಂದ್ ಕರೋ, ವೆಲೆಂಟೈನ್ಸ್ ಡೇ ಬಂದ್ ಕರೋ' ಎಂಬ ಘೋಷಣೆ ಕೂಗುತ್ತಾ ರೆಸ್ಟೋರೆಂಟ್ ನಲ್ಲಿ  ಅಲಂಕಾರಕ್ಕಾಗಿ ಬಳಸಲಾಗಿದ್ದ ಕೆಂಪು ಬಲೂನುಗಳನ್ನು ಒಡೆಯುತ್ತಿರುವುದು ಕಾಣಿಸುತ್ತದೆ. ಒಬ್ಬನಂತೂ ಟೇಬಲ್ ಮೇಲಿದ್ದ ಒಂದು ಪೋಸ್ಟರನ್ನು ಹರಿಯುತ್ತಿರುವುದು ಕಾಣಿಸುತ್ತದೆ.

ರೆಸ್ಟೋರೆಂಟ್ ಉದ್ಯೋಗಿಯೊಬ್ಬರು ಅವರೆಲ್ಲರಿಗೂ ಹೊರಗೆ ಹೋಗುವಂತೆ ಸೂಚಿಸಿದಾಗ ಅವರು ಮತ್ತೆ ಕುರ್ಚಿ ಮೇಲೇರಿ ಬಲೂನು ಒಡೆದು ನಂತರ ಹೊರಟು ಹೋಗುವುದೂ ಕಾಣಿಸುತ್ತದೆ.

ಇದೇ ಗುಂಪು ನಂತರ ಹೈದರಾಬಾದ್ ಇನ್‍ಆರ್ಬಿಟ್ ಮಾಲ್‍ ನಲ್ಲೂ ದಾಂಧಲೆಗೈದಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳು 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗುತ್ತಿರುವುದೂ ಕೇಳಿಸುತ್ತದೆ.

ಪ್ರಕರಣ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲದೇ ಇದ್ದರೂ ವೀಡಿಯೋ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News