ಹುತಾತ್ಮ ಯೋಧನ ಬಗ್ಗೆ ಬಿಎಸ್‌ವೈಗೆ ಎಸ್ಸೆಂ ಕೃಷ್ಣ ಪತ್ರ: ಸರಕಾರದ ವಿರುದ್ಧ ಮಾಜಿ ಸಿಎಂ ಗರಂ ಆಗಿದ್ದೇಕೆ ?

Update: 2020-02-16 12:42 GMT

ಬೆಂಗಳೂರು, ಫೆ. 16: ಕಾಶ್ಮೀರದ ಫುಲ್ವಾಮಾದಲ್ಲಿ 2019ರ ಫೆ.14ರಂದು ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಎಚ್.ಗುರು ಎಂಬ ವೀರ ಯೋಧ ಹುತಾತ್ಮರಾಗಿದ್ದು, ವರ್ಷ ಕಳೆದರೂ ಯೋಧನ ಚಿತಾಭಸ್ಮವನ್ನು ವಿಸರ್ಜಿಸದೆ, ಅವರ ಸ್ಮಾರಕವನ್ನೂ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ದುರಾದೃಷ್ಟಕರ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಫುಲ್ವಾಮಾ ದಾಳಿ ಅತ್ಯಂತ ಘೋರ ಕೃತ್ಯವಾಗಿದ್ದು, ಇಡೀ ರಾಷ್ಟ್ರ ದಾಳಿಯ ಬಗ್ಗೆ ಕಂಬನಿ ಮಿಡಿದಿತ್ತು. ಇಂತಹ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಕರ್ನಾಟಕದ ಯೋಧನ ಸ್ಮಾರಕ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ವಹಿಸದೆ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖಂಡನೀಯ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದರಿ ಯೋಧನ ಬಲಿದಾನ ಮುಂದಿನ ಪೀಳಿಗೆಗೆ ಆದರ್ಶವಾಗಬೇಕಿದ್ದು, ಅದನ್ನು ಕಾರ್ಯರೂಪಕ್ಕೆ ಇಳಿಸಬೇಕಾದ ಸರಕಾರ ಕ್ರಮ ವಹಿಸದೆ ನಿರ್ಲಕ್ಷಿಸಿರುವುದು ಸಾರ್ವಜನಿಕರ ಅವಕೃಪೆಗೆ ಒಳಗಾಗಿದೆ. ಸರಕಾರ ಇಂತಹ ವಿಷಯಗಳ ಬಗ್ಗೆ ತುರ್ತು ಗಮನ ವಹಿಸುವುದು ಅವಶ್ಯವಿದ್ದು, ನಾನು ಸಿಎಂ ಆಗಿದ್ದಾಗ ಸ್ಥಾಪನೆಗೊಂಡ ಕಾವೇರಿ ನೀರಾವರಿ ನಿಗಮದ ಮೂಲಕ ತುರ್ತಾಗಿ ಸದರಿ ವೀರ ಯೋಧನ ಸ್ಮಾರಕ ನಿರ್ಮಾಣಕ್ಕೆ ಕ್ರಮ ವಹಿಸಿ ಅದರ ನಿರ್ವಹಣೆಯನ್ನೂ ನಿಗಮದ ಮೂಲಕ ನಿರ್ವಹಿಸಿ ಯೋಧನ ಬಲಿದಾನವನ್ನು ನೆನೆಯುವಂತಹ ಕಾರ್ಯ ತಮ್ಮಿಂದ ಆಗಲಿ ಎಂದು ಆಶಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಒಂದು ವರ್ಷವಾದರೂ ವಿಸರ್ಜನೆಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಯೋಧ ಗುರುವಿನ ಚಿತಾಭಸ್ಮವನ್ನು ಯಾವ ಕಾರಣಕ್ಕೆ ವಿಸರ್ಜಿಸಿಲ್ಲ ಎಂಬುದನ್ನು ಪತ್ತೆಹಚ್ಚಿ ಅದಕ್ಕೆ ಶಾಸ್ತ್ರೋಕ್ತವಾಗಿ ವಿಸರ್ಜನಾ ಕಾರ್ಯ ಕೈಗೊಳ್ಳಲು ತಾವು ಸೂಕ್ತ ನಿರ್ದೇಶನ ನೀಡುವಂತೆ ಕೋರುತ್ತೇನೆ. ಯೋಧನ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಎಸ್ಸೆಂ ಕೃಷ್ಣ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News