ಸಹಕಾರಿ ಸಾರಿಗೆ ಕಾರ್ಮಿಕರ ಧರಣಿ ಮೂರನೇ ದಿನಕ್ಕೆ: ಮಾತುಕತೆಗೆ ಆಹ್ವಾನಿಸಿದ ರಾಜ್ಯ ಸರಕಾರ

Update: 2020-02-18 18:45 GMT

ಚಿಕ್ಕಮಗಳೂರು, ಫೆ.18: ಸಹಕಾರಿ ಸಾರಿಗೆ ಕಾರ್ಮಿಕರು ಸಂಸ್ಥೆಯ ಆರ್ಥಿಕ ಸಮಸ್ಯೆಯಿಂದಾಗಿ ರವಿವಾರದಿಂದ ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಸೋಮವಾರದಿಂದ ಸರಕಾರದ ನೆರವಿಗಾಗಿ ಧರಣಿ ಆರಂಭಿಸಿರುವ ಬೆನ್ನಲ್ಲೆ ರಾಜ್ಯ ಸರಕಾರ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ.

ಈ ಸಂಬಂಧ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಸಂಸ್ಥೆಯ ನಿರ್ದೇಶಕ ವಿಜಯ್‌ ಕುಮಾರ್, ಮಂಗಳವಾರ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಸಂಸ್ಥೆಯ ಅಧ್ಯಕ್ಷರಿಗೆ ಕರೆ ಮಾಡಿ ಮಾತುಕತೆಗೆ ಕರೆದಿದ್ದಾರೆ. ಬುಧವಾರ ಬೆಳಗ್ಗೆ ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಸಮಸ್ಯೆ ಪರಿಹಾರದ ಬಗ್ಗೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಆಡಳಿತ ಮಂಡಳಿ ಸದಸ್ಯರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಸರಕಾರ ನಮ್ಮ ಸಮಸ್ಯೆಯನ್ನು ಪರಿಹರಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಹಲವು ಭಾಗಗಳು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಪ್ರಯಾಣಿಕರಿಗೆ ಸಹಕಾರಿಯಾಗಿದ್ದ ಕಾರ್ಮಿಕರೇ ಒಡೆಯರಾಗಿ ದಕ್ಷಿಣ ಏಷ್ಯಾದಲ್ಲಿ ಹೊಸ ಕ್ರಾಂತಿ ಆರಂಭಿಸಿದ್ದ ಸಹಕಾರಿ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ರವಿವಾರ ಸ್ಥಗಿತಗೊಂಡಿರುವ ಸಹಕಾರ ಸಾರಿಗೆ ಸಂಸ್ಥೆಯ ಕಾರ್ಮಿಕರು ಜಿಲ್ಲೆಯ ಕೊಪ್ಪ ಪಟ್ಟಣದ ಸಾರಿಗೆ ಸಂಸ್ಥೆಯ ಕಚೇರಿ ಆವರಣದಲ್ಲಿ ಸರಕಾರದ ನೆರವಿಗಾಗಿ ಸೋಮವಾರದಿಂದ ಆರಂಭಿಸಿರುವ ಧರಣಿ ಎರಡನೇ ದಿನವೂ ಮುಂದುವರಿದಿದೆ. ಸೋಮವಾರ ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ, ನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಮೂನ್ನೂರಕ್ಕೂ ಹೆಚ್ಚು ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಯ ಪುನಃಶ್ಚೇತನಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರ ಹಾಗೂ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಧರಣಿಗೆ ಕೊಪ್ಪ ತಾಲೂಕಿನ ಎಲ್ಲ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಬೆಂಬಲ ಸೂಚಿಸಿ ಪ್ರತಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಸೋಮವಾರ ಆರಂಭವಾದ ಧರಣಿ ಮಂಗಳವಾರವೂ ಮುಂದುವರಿದಿದ್ದು, ಮಂಗಳವಾರವೂ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಧರಣಿಗೆ ಬೆಂಬಲ ಸೂಚಿಸಿ ಭಾಗವಹಿಸಿದ್ದರು.

ಮಂಗಳವಾರ ಧರಣಿ ಉದ್ದೇಶಿಸಿ ಮಾತನಾಡಿದ ಸಹಕಾರಿ ಸಾರಿಗೆ ಸಂಸ್ಥೆಯ ಮಾಲಕರು, ಇತ್ತೀಚಿನ ಆರ್ಥಿಕ ಸಂಕಷ್ಟ, ಬಿಡಿ ಬಾಗಗಳ ಬೆಲೆ ಏರಿಕೆ, ತೈಲಬೆಲೆ ಏರಿಕೆ, ಜಿಎಸ್‌ಟಿ, ಸಿಬ್ಬಂದಿ ವೇತನ ವೆಚ್ಚ ಏರಿಕೆಯ ಹೊಡೆತ ಸಹಿಸಲಾಗದೆ ಸಾರಿಗೆ ಸಂಸ್ಥೆ ದಿವಾಳಿ ಹಂತಕ್ಕೆ ತಲುಪಿದೆ. ಸರಕಾರದ ನೆರವಿಗಾಗಿ ಸಿಎಂ ಯಡಿಯೂರಪ್ಪಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಅವರು ಸರಕಾರ ಸ್ವಾಮ್ಯದ ಸಾರಿಗೆ ಸಂಸ್ಥೆಗೆ ನೀಡುವ ನೆರವನ್ನು ಸಹಕಾರಿ ಸಾರಿಗೆ ಸಂಸ್ಥೆಗೆ ವಿಸ್ತರಿಸುವ ಭರವಸೆ ನೀಡಿದ್ದರು. ಆದರೆ, ಹಣಕಾಸು ಇಲಾಖೆ ಸಮ್ಮತಿ ನೀಡದಿರುವುದರಿಂದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ಸಂಸ್ಥೆ ಮುಂದುವರಿಸಿ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದರು. ಸರಕಾರದ ನೆರವು ದೊರೆಯದಿದ್ದರೆ ದೀರ್ಘಕಾಲ ಗ್ರಾಮೀಣ ಜನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ್ದ ನಮ್ಮ ಸಂಸ್ಥೆಯ ಬಸ್‌ಗಳ ಓಡಾಟ ಅಸಾಧ್ಯ. ಜೊತೆಗೆ ಸಹಕಾರಿ ತತ್ವದಡಿಯಲ್ಲಿ ಸಂಸ್ಥೆ ರಚಿಸಿಕೊಂಡು ಮಾಲಕರಾಗಿದ್ದರೂ ಕಾರ್ಮಿಕರಾಗಿ ದುಡಿಯುತ್ತಿರುವ ಸಿಬ್ಬಂದಿ ಹಾಗೂ ಅವರ ಕುಟುಂಬದ ಬದುಕು ಅಸಹನೀಯವಾಗುತ್ತದೆ. ಹೀಗಾಗಿ ಸರಕಾರದ ಮೇಲೆ ಒತ್ತಡ ಹೇರಲು ಚಳವಳಿ ಆರಂಭಿಸಿದ್ದು, ಸರಕಾರ ನಮ್ಮ ಬೇಡಿಕೆ ಈಡೇರಿಸುವ ವರಗೆಗೂ ಧರಣಿ ನಡೆಸಲಾಗುವುದು ಎಂದ ಮುಖಂಡರು, ಸರಕಾರ ತಮ್ಮ ಮನವಿಗೆ ಸ್ಪಂದಿಸಬೇಕು. ಸಹಕಾರಿ ಸಂಸ್ಥೆ ಬಸ್‌ಗಳು ಮತ್ತೆ ಬೀದಿಗಿಳಿಯಲು ನೆರವಾಗಬೇಕು. ಸರಕಾರ ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

ಸೋಮವಾರ ನಡೆದ ಧರಣಿಯಲ್ಲಿ ಮಾಜಿ ಸಚಿವ ಡಿ.ಎನ್. ಜೀವರಾಜ್ ಭಾಗವಹಿಸಿ ಮಾತನಾಡಿದರು. ಚರ್ಚಿಸಲಾಗಿದ್ದು, ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದರು. ಬುಧವಾರವೂ ಕೊಪ್ಪ ಪಟ್ಟಣದ ತಾಲೂಕು ಕಚೇರಿ ಎದುರು ಕಾರ್ಮಿಕರ ಧರಣಿ ಮುಂದುವರಿಯಲಿದೆ ಎಂದು ಸಂಸ್ಥೆಯ ಮುಖಂಡರು ವಾರ್ತಾಭಾರತಿಗೆ ತಿಳಿಸಿದ್ದಾರೆ.

ಮಂಗಳವಾರ ಸಂಸ್ಥೆಯ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬದವರೂ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು ಕೊಪ್ಪಪಟ್ಟಣದಲ್ಲಿ ನಡೆಸುತ್ತಿದ್ದ ಧರಣಿಗೆ ತಾಲೂಕಿನ ಗೌರಿಗದ್ದೆ ಮಠದ ಸ್ವಾಮೀಜಿ ವಿನಯ್ ಗುರೂಜಿ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ಸಹಕಾರ ಸಾರಿಗೆ ಸಂಸ್ಥೆ ಮಲೆನಾಡಿನ ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರಯಾಣಕ್ಕೆ ಮೂರು ದಶಕದಿಂದ ನೆರವಾಗುತ್ತಿದೆ. ಸರಕಾರ ಸಂಕಷ್ಟದಲ್ಲಿ ನೆರವಾಗಲೇ ಬೇಕು. ಸಹಕಾರಿ ತತ್ವದ, ಕಾರ್ಮಿಕರೇ ಮಾಲಕರಾಗುವಂತಹ ಉದ್ದಿಮೆಗಳಿಗೆ ಸರಕಾರಗಳು ನೆರವಿನ ಹಸ್ತ ನೀಡಲೇಬೇಕು. ಕಾರ್ಮಿಕರ ಹೋರಾಟಕ್ಕೆ ತಾನು ಸದಾ ಬೆಂಬಲವಾಗಿರುವುದಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News