"ಯು ಆರ್ ಎ ಪಿತಾಮಹ ಆಫ್ ಬೆಂಗಳೂರು"
ಬೆಂಗಳೂರು, ಫೆ. 20: ‘ಹಿರಿಯರಾದ ರಾಮಲಿಂಗಾರೆಡ್ಡಿ ಅವರು ಯಾರಿಗೆ ಸ್ನೇಹಿತರಲ್ಲ. ಯು ಆರ್ ಎ ಪಿತಾಮಹ ಆಫ್ ಬೆಂಗಳೂರು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ರೆಡ್ಡಿ ಕಾಲೆಳೆದ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಯಿತು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವೇಳೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಎಲ್ಲರಿಗೂ ಸ್ನೇಹಿತರೇ ಎಂದರು. ಜತೆಗೆ ಸಚಿವ ಎಸ್.ಟಿ.ಸೋಮಶೇಖರ್ ಕೂಡ ನನಗೆ ಆಗಲೂ ಸ್ನೇಹಿತ, ಈಗಲೂ ಸ್ನೇಹಿತ ಎಂದು ಹೇಳಿದರು.
ಈ ವೇಳೆ ಎದ್ದು ನಿಂತ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ರಾಮಲಿಂಗಾರೆಡ್ಡಿ ಹಾಗೂ ಆರ್.ಅಶೋಕ್ ಬೆಂಗಳೂರು ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನೀವು(ಸಿದ್ದರಾಮಯ್ಯ) ಕೆ.ಜೆ.ಜಾರ್ಜ್ ಅವರನ್ನು ಬೆಳೆಸಿದ್ದೀರಿ ಎಂದು ಛೇಡಿಸಿದರು.
ರಾಮಲಿಂಗಾರೆಡ್ಡಿ ಅವರ ಕುರಿತು ಪಿತಾಮಹ ಆಫ್ ಬೆಂಗಳೂರು ಎಂದು ನೀವು ಉಲ್ಲೇಖಿಸಿರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪುಟದಲ್ಲಿ ಅರ್ಧ ನಿಮ್ಮ ಶಿಷ್ಯರೇ: ರಾಜ್ಯ ಸರಕಾರದಲ್ಲಿ ಅರ್ಧ ಸಂಪುಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯರೇ ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದದ್ದು ನಡೆಯಿತು.