ಹನೂರು: ಪ್ರಭಾರ ತಹಶೀಲ್ದಾರ್ ಆಗಿ ಬಸವರಾಜು ಚಿಗರಿ ಅಧಿಕಾರ ಸ್ವೀಕಾರ

Update: 2020-02-21 18:35 GMT

ಹನೂರು, ಫೆ.21: ಚಾಮರಾಜ ನಗರ ಜಿಲ್ಲಾಧಿಕಾರಿಯವರ ಆದೇಶ ಮೇರೆಗೆ ಗುಂಡ್ಲುಪೇಟೆ ತಾಲೂಕು ಕಚೇರಿಯಿಂದ ಹನೂರು ತಾಲೂಕು ಕಚೇರಿಗೆ ಪ್ರಭಾರ ತಹಶೀಲ್ದಾರ್ ಆಗಿ ಬಸವರಾಜು ಚಿಗರಿ ಅವರು ತಾತ್ಕಾಲಿಕ ನಿಯೋಜನೆಗೊಂಡಿದ್ದು, ಇಂದು ಅಧಿಕಾರ ವಹಿಸಿಕೊಂಡರು.

ಈ ಹಿಂದೆ ಪ್ರಭಾರ ತಹಶೀಲ್ದಾರ್ ಆಗಿ ಕೆ.ಕುನಾಲ್‍ರವರು ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ 2 ಕಡೆ ಕಾರ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಜನ ಸಾಮಾನ್ಯರ ಕೆಲಸ ಕಾರ್ಯಗಳು ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿ ಎಂ.ಆರ್.ರವಿ ರವರು ಗುಂಡ್ಲುಪೇಟೆಯಲ್ಲಿ ಹಾಲಿ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಸವರಾಜು ಚಿಗರಿ ರವರನ್ನು ಹನೂರು ತಹಶೀಲ್ದಾರ್ ಕಚೇರಿಗೆ ಪ್ರಭಾರ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಲು ಆದೇಶ ನೀಡಿದ್ದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನನ್ನ ವ್ಯಾಪ್ತಿಗೆ ಬರುವ ರೈತರು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಿಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಈ ಹಿಂದೆ ಯಳಂದೂರು ಟಿ.ನರಸೀಪುರ ಸರಗೂರು ಗುಂಡ್ಲುಪೇಟೆ ತಾಲೂಕಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಹಾಗಾಗಿ ಜಿಲ್ಲಾಧಿಕಾರಿಯವರ ಆದೇಶವನ್ನು ಗಮನದಲ್ಲಿಟ್ಟುಕೊಂಡು ರೈತಾಪಿ ವರ್ಗ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ಸೌಕರ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News