2023ಕ್ಕೂ ನಮ್ಮದೇ ಸರ್ಕಾರ: ಡಿಸಿಎಂ ಡಾ.ಅಶ್ವತ್ಥನಾರಾಯಣ

Update: 2020-02-24 08:40 GMT

ಕಲಬುರಗಿ, ಫೆ.24:  ನಮ್ಮ ಸರ್ಕಾರ ಸುಭದ್ರವಾಗಿದ್ದು, ಈ ಅವಧಿಯನ್ನು ಸಂಪೂರ್ಣಗೊಳಿಸುವುದಲ್ಲದೇ 2023ರಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಕಲಬುರಗಿ ಪ್ರವಾಸ ಕೈಗೊಂಡಿರುವ ಡಾ. ಅಶ್ವತ್ಥನಾರಾಯಣ ಸುದ್ದಿಗಾರರ ಜತೆ ಸೋಮವಾರ ಮಾತನಾಡಿದರು.

32 ಶಾಸಕರು ಬಿಜೆಪಿಗೆ ರಾಜೀನಾಮೆ ಕೊಡುತ್ತಾರೆ ಎಂಬ ಸಿ.ಎಂ.ಇಬ್ರಾಹೀಂ ಅವರ ಹೇಳಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಾ. ಅಶ್ವತ್ಥನಾರಾಯಣ,"ಅವರು ಯಾವ 32 ಜನರ ಬಗ್ಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಅವರ ಪಕ್ಷದ 32 ಮಂದಿ ಆಚೆ ಬರುತ್ತಾರೋ ಏನೋ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದರು.

"ಸದ್ಯ ಜೆಡಿಎಸ್‌-ಕಾಂಗ್ರೆಸ್‌ ನಡುವೆ ಹೊಂದಾಣಿಕೆ ಇಲ್ಲ.  ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ  ನಮ್ಮ ಸರ್ಕಾರವನ್ನು ಬೆಂಬಲಿಸಿದ್ದಾರೆ.  ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವುದು ಖಚಿತ ಎಂದರು.

"ಎನ್‌ ಕೆ ಸಿಂಗ್‌ ನೇತೃತ್ವ 15ನೇ ಹಣಕಾಸು ಆಯೋಗ ತನ್ನದೇ ಆದ ಮಾನದಂಡ ಅಳವಡಿಸಿಕೊಂಡಿದೆ.  ಅನುದಾನ ಹಂಚಿಕೆಯಲ್ಲಿ ಕೊಂಚ ಏರುಪೇರಾಗಿದೆ. ಈ ಸಂಬಂಧ  ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿಗಳು ಮಾತುಕತೆ ನಡೆಸಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ತೊಂದರೆಯನ್ನು ಮನವರಿಕೆ ಮಾಡಿಕೊಡುವರು. ಕೇಂದ್ರದಿಂದ ರಾಜ್ಯಕ್ಕೆ ಯಾವ ಅನ್ಯಾಯವೂ ಆಗದು ಎಂದು ಅವರು ಹೇಳಿದರು.     

"ಅಮೆರಿಕ ಅಂದರೆ ದೊಡ್ಡಣ ಎನ್ನುವ ಕಾಲ ಇತ್ತು. ಈಗ ಭಾರತವೂ ಸದೃಢವಾಗಿ ಬೆಳೆದು,  ಆ ದೇಶದ ಜತೆ ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದಿದೆ.  ಭಾರತೀಯರು ಅಭಿಮಾನ ಪಡುವ ರೀತಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಹೋದಾಗಲೂ ಅಪಾರ ಗೌರವ, ಮನ್ನಣೆ ನೀಡಿದ್ದರು.  ಟ್ರಂಪ್‌ ಭೇಟಿಯಿಂದ ಉಭಯ ದೇಶಗಳ ನಡುವಿನ ಸ್ನೇಹ ಬಾಂಧವ್ಯ ಹೆಚ್ಚುವುದು, ಇದರಿಂದ ಅಮೆರಿಕಕ್ಕೆ ವಲಸೆ ಹೋಗುವ ನಮ್ಮ ಯುವಜನರಿಗೆ ವಿಫಲ ಅವಕಾಶಗಳು ತೆರೆದುಕೊಳ್ಳುವುದು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News