ರಾಷ್ಟ್ರವಿರೋಧಿ ಪ್ರವೃತ್ತಿಯ ಸುದ್ದಿ ಪ್ರಸಾರ ಬೇಡ: ಟಿವಿ ಚಾನಲ್ಗಳಿಗೆ ಸರ್ಕಾರ ತಾಕೀತು
ಹೊಸದಿಲ್ಲಿ, ಫೆ.26: ಹಿಂಸೆಗೆ ಪ್ರಚೋದನೆ ನೀಡುವ ಅಥವಾ ರಾಷ್ಟ್ರವಿರೋಧಿ ಮನೋಭಾವನೆಗೆ ಕಾರಣವಾಗುವ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಲ್ಲ ಖಾಸಗಿ ಸುದ್ದಿ ವಾಹಿನಿಗಳಿಗೆ ತಾಕೀತು ಮಾಡಿದೆ.
ಸಿಎಎ ಪರ ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವೆ ದಿಲ್ಲಿಯಲ್ಲಿ ನಡೆದ ಘರ್ಷಣೆಯಿಂದ 13 ಮಂದಿ ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ ಈ ಸೂಚನೆಯನ್ನು ಎಲ್ಲ ಚಾನಲ್ಗಳಿಗೆ ನೀಡಲಾಗಿದೆ.
"ಹಿಂಸೆಯನ್ನು ಪ್ರಚೋದಿಸುವ ಅಥವಾ ಕಾನೂನು ಹಾಗೂ ಸುವ್ಯವಸ್ಥೆಗೆ ವಿರುದ್ಧವಾದ ಅಥವಾ ರಾಷ್ಟ್ರವಿರೋಧಿ ಭಾವನೆಯನ್ನು ಪ್ರಚೋದಿಸುವ ಯಾವುದೇ ಸುದ್ದಿ ಅಥವಾ ದೃಶ್ಯಾವಳಿಯನ್ನು ಪ್ರಸಾರ ಮಾಡಬಾರದು" ಎಂದು ಸೂಚಿಸಲಾಗಿದೆ.
ಧಾರ್ಮಿಕ ಅಥವಾ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿ, ಧಾರ್ಮಿಕ ಗುಂಪುಗಳಲ್ಲಿ ದ್ವೇಷಭಾವನೆ ಹುಟ್ಟುಹಾಕುವ ದೃಶ್ಯ ಅಥವಾ ಮಾಹಿತಿ ಪ್ರಚಾರ ಮಾಡದಂತೆಯೂ ಸಲಹೆ ಮಾಡಲಾಗಿದೆ. ಮಾನಹಾನಿಕರ, ಉದ್ದೇಶಪೂರ್ವಕ, ಸುಳ್ಳು ಮತ್ತು ಅರ್ಧಸತ್ಯದ ಸುದ್ದಿಗಳನ್ನು ಪ್ರಸಾರ ಮಾಡದಂತೆಯೂ ಸೂಚಿಸಲಾಗಿದೆ.
ಕೇಬಲ್ ಟೆಲಿವಿಷನ್ ಜಾಲ (ನಿಯಂತ್ರಣ) ಕಾಯ್ದೆ- 1995ರಲ್ಲಿ ನಿರ್ದಿಷ್ಟಪಡಿಸಿದ ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆಯನ್ನು ಉಲ್ಲಂಘಿಸುವ ಕಾರ್ಯಕ್ರಮ ಪ್ರಸಾರ ಮಾಡಬಾರದು. ಎಲ್ಲ ಟಿವಿ ಚಾನಲ್ಗಳು ಇದಕ್ಕೆ ಕಟ್ಟುನಿಟ್ಟಾಗಿ ಬದ್ಧರಾಗಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.