ಪದವಿ ಅಧ್ಯಾಪಕರ ವರ್ಗಾವಣೆ ನೀತಿಗೆ ಶೀಘ್ರದಲ್ಲೇ ತಿದ್ದುಪಡಿ: ಡಾ.ಅಶ್ವಥ್ ನಾರಾಯಣ

Update: 2020-02-26 12:58 GMT

ಬಳ್ಳಾರಿ, ಫೆ.26: ಸರಕಾರಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ಆಗದಂತೆ ವರ್ಗಾವಣೆ ನೀತಿಗೆ ತಿದ್ದುಪಡಿ ತಂದು, ಎಲ್ಲ ಕಾಲೇಜುಗಳಲ್ಲಿ ಅಧ್ಯಾಪಕರು ಇರುವಂತೆ ನೋಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದ್ದಾರೆ. 

ಬುಧವಾರ ನಗರದಲ್ಲಿನ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿ ಹೊಸದಾಗಿ ನಿರ್ಮಿಸಿರುವ ಗ್ರಂಥಾಲಯ, ಸಾಮಾಜಿಕ ವಿಜ್ಞಾನ, ಸಾಮಾಜಿಕ ಕಾರ್ಯ ಹಾಗೂ ಮಹಿಳಾ ಅಧ್ಯಯನದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಾಪಕರು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆ ಆಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ಬಗೆಹರಿಸುವ ಕೆಲಸ ಆಗುತ್ತಿದೆ. ವರ್ಗಾವಣೆ ನೀತಿಗೆ ತಿದ್ದುಪಡಿ ತಂದು ಮುಂದಿನ ಮಾರ್ಚ್‌ನಲ್ಲೆ ಅನುಮೋದನೆ ಪಡೆಯಲಾಗುವುದು. ಇದರಿಂದ ಎಲ್ಲ ಕಾಲೇಜುಗಳಿಗೆ ಅಧ್ಯಾಪಕರ ನಿಯೋಜನೆ ಸರಿಯಾದ ರೀತಿಯಲ್ಲಿ ಆಗಲಿದೆ ಎಂದು ಅವರು ತಿಳಿಸಿದರು.

ಹೊಸ ಶಿಕ್ಷಣ ನೀತಿ ಪ್ರಕಾರ, ಪ್ರತಿ ಕಾಲೇಜು ಸ್ವಾಯತ್ತವಾಗಬೇಕು. ಅದಕ್ಕಾಗಿ ಕಾಲೇಜಿನಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ಜತೆಗೆ ಹೊಸ ಮಾನದಂಡಗಳ ಅನ್ವಯ ಸುಧಾರಣೆಗಳನ್ನು ತರಬೇಕು. ಶಿಕ್ಷಣದ ಗುಣಮಟ್ಟ ಸುಧಾರಿಸಿದಾಗ ಮಾತ್ರ ಉಳಿದೆಲ್ಲ ಕ್ಷೇತ್ರಗಳಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದು ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.

ಈ ನಿಟ್ಟಿನಲ್ಲಿ ಅಧ್ಯಾಪಕರಿಗೆ ತರಬೇತಿ ಹಾಗೂ ತರಬೇತುದಾರರಿಗೆ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವವಿದ್ಯಾಲಯಗಳ ಆಡಳಿತ ಸರಿ ಆಗಬೇಕು, ಇಲ್ಲದಿದ್ದರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಮಾಂಟೆಸರಿ ಮಾದರಿಯ ಅಂಗನವಾಡಿ: 3-6 ವರ್ಷದ ಅವಧಿಯಲ್ಲಿ ಮಕ್ಕಳ ಮೆದುಳಿನ ಬೆಳವಣಿಗೆ ಆಗುವುದು, ಆಗ ಅವರಿಗೆ 10-15 ಭಾಷೆ ಕಲಿಯುವ ಸಾಮರ್ಥ್ಯ ಇರುತ್ತದೆ. ಹಾಗಾಗಿ ನಮ್ಮ ಅಂಗನವಾಡಿ ಕೇಂದ್ರಗಳು ಮಾಂಟೆಸರಿ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು, ಇದರಿಂದ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.

ಅಂಗನವಾಡಿಗಳು ಮಾಂಟೆಸರಿ ಮಾದರಿಯಲ್ಲಿ ಕಾರ್ಯನಿರ್ವಹಿಸಿದಾಗ ಮುಂದಿನ 10-15 ವರ್ಷಗಳಲ್ಲಿ ಆಗುವ ಬದಲಾವಣೆಗೆ ಮಕ್ಕಳು ಒಗ್ಗಿಕೊಳ್ಳಬಹುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನಿಧಿ ಬಳಸಿಕೊಂಡು ಅಂಗನವಾಡಿಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಯೂನಿಫೈಡ್ ಸಿಸ್ಟೆಮ್: ರಾಜ್ಯದ ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆಗೆ ಏಕೀಕೃತ ವ್ಯವಸ್ಥೆ (ಯೂನಿಫೈಡ್ ಯೂನಿವರ್ಸಿಟಿ ಅಂಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟೆಮ್) ರೂಪಿಸಲಾಗುವುದು. ಇದರಲ್ಲೇ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವ ಆನ್‌ಲೈನ್ ವೇದಿಕೆಯೂ ಇರಲಿದೆ ಎಂದು ಅವರು ತಿಳಿಸಿದರು.

ಇ-ಆಡಳಿತದ ಮೂಲಕ ಈ ವ್ಯವಸ್ಥೆ ಜಾರಿ ತಂದು ಮೌಲ್ಯಮಾಪನ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು. ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸದ್ಭಳಕೆ ಆಗಬೇಕು ಎಂದು ಅಶ್ವಥ್ ನಾರಾಯಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News