ಶಿವಮೊಗ್ಗ: ದೆಹಲಿ ಹಿಂಸಾಚಾರ ಖಂಡಿಸಿ ಎಸ್ ಡಿಪಿಐ ಪ್ರತಿಭಟನೆ
ಶಿವಮೊಗ್ಗ, ಫೆ.27: ದೆಹಲಿ ಹಿಂಸಾಚಾರ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ) ಶಿವಮೊಗ್ಗ ಶಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಿಎಎ, ಎನ್.ಆರ್.ಸಿ ಹಾಗೂ ಎನ್.ಪಿ.ಆರ್. ಹೆಸರಿನಲ್ಲಿ ಮುಸ್ಲಿಮರ ವಿರುದ್ದ ವ್ಯವಸ್ಥಿತ ದಾಳಿ ನಡೆಸುತ್ತಿರುವುದು ಖಂಡನೀಯ. ಈಶಾನ್ಯ ದೆಹಲಿಯಲ್ಲಿ ಸಂಘ ಪರಿವಾರ ಮತ್ತು ಪೊಲೀಸರು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಉದ್ದೇಶಪೂರ್ವಕವಾಗಿ ಹಿಂಸಾಕೃತ್ಯ ಎಸಗಿದ್ದಾರೆ ಎಂದು ಪ್ರತಿಭಟನಾನಿರತರು ಅರೋಪಿಸಿದರು.
ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆ ನಂತರ ಸಿಎಎ ಹೋರಾಟ ಹಿಂಸಾತ್ಮಕ ಮಾರ್ಗ ತಲುಪಿದೆ. ದುಷ್ಕರ್ಮಿಗಳು ಧರ್ಮವನ್ನು ವಿಚಾರಿಸುತ್ತಾ ಮುಸ್ಲಿಮರ ಮೇಲೆ ತೀವ್ರ ತರವಾದ ಹಲ್ಲೆ ನಡೆಸಿದ್ದಾರೆ. ಘಟನೆಗೆ ಪರೋಕ್ಷ ಕಾರಣರಾದ ಶಾಸಕ ಕಪಿಲ್ ಮಿಶ್ರಾ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಲೀಂ ಖಾನ್, ಅಲ್ಲಾಭಕ್ಷ್, ಕಲೀಂಉಲ್ಲಾ, ಇಮ್ರಾನ್, ಅಮ್ಜದ್ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿದ್ದರು.