ನೀರಿನ ವಿಚಾರದಲ್ಲಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ: ಐವರಿಗೆ ಗಂಭೀರ ಗಾಯ

Update: 2020-03-06 12:32 GMT

ಶಿವಮೊಗ್ಗ, ಮಾ.6: ಎರಡು ಕುಟುಂಬಗಳ ನಡುವೆ ಉಂಟಾದ ಜಮೀನಿಗೆ ನೀರು ಹರಿಸುವ ವಿಚಾರದ ಗಲಾಟೆಯು ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಗುರುವಾರ ರಾತ್ರಿ ನಡೆದಿದೆ.

ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಭದ್ರಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಹೊಡೆದಾಟದಲ್ಲಿ ಅಡ್ಡಮನೆ ಕರಿಯಪ್ಪ (65) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ತೀವ್ರ ಗಾಯಗೊಂಡಿದ್ದಾರೆ.

ಜಮೀನು ಮತ್ತು ಜಮೀನಿಗೆ ನೀರು ಹಾಯಿಸಿಕೊಳ್ಳುವ ವಿಚಾರವಾಗಿ ಗುರುವಾರ ರಾತ್ರಿ ಈ ಗಲಾಟೆ ನಡೆದಿದೆ. ಕರಿಯಪ್ಪ ಮತ್ತು ಕುಟುಂಬದ ಐವರ ಮೇಲೆ ಜಗದೀಶ್ ಮಂಜಪ್ಪ, ರಮೇಶಪ್ಪ ಹಾಗೂ ಇತರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆ ನಂತರ ಇವರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದವರನ್ನು ಶಿವಮೊಗ್ಗದ ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News