'ಲಾಕ್ ಡೌನ್' ಆದೇಶ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್: ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಎಚ್ಚರಿಕೆ
ಮೈಸೂರು,ಮಾ.23: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ಓಡಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಎಚ್ಚರಿಕೆ ನೀಡಿದ್ದಾರೆ.
ಜನರು ಲಾಕ್ ಡೌನ್ ಆದೇಶವನ್ನ ಲಘುವಾಗಿ ಪರಿಗಣಿಸಿದ್ದಾರೆ. ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬಿಟ್ಟು ಬೇರೆ ಅಂಗಡಿಗಳು ತೆರೆದಿದ್ದಾರೆ. ಇವೆಲ್ಲವು ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಜನ ಯಾಕೆ ಇದನ್ನು ಸಿರಿಯಸ್ ಆಗಿ ತೆಗೆಯುತ್ತಿಲ್ಲ ಅಂತ ನಮಗೆ ಗೊತ್ತಾಗುತ್ತಿಲ್ಲ. ಇಂದಿನಿಂದ ಪೊಲೀಸರು ಮತ್ತಷ್ಟು ಗಂಭೀರವಾಗುತ್ತಾರೆ. ಮೈಸೂರಿನಲ್ಲಿ ಎಲ್ಲ ಖಾಸಗಿ ವಾಹನ ನಿಷೇಧ ಮಾಡಲಾಗಿದೆ. ಓಲಾ, ಉಬರ್, ಆಟೋ, ಎಲ್ಲವನ್ನೂ ನಿಷೇಧಿಸಲಾಗಿದೆ. ಹೊರ ಜಿಲ್ಲೆಯಿಂದ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತೇವೆ. ಅನಗತ್ಯ ಓಡಾಡ ಇದ್ದರೆ ಪ್ರಶ್ನೆ ಮಾಡುತ್ತೇವೆ. ಉದ್ದೇಶ ಇಲ್ಲದೆ ಓಡಾಡಿದರೆ ಕೇಸ್ ಹಾಕೋದು ಗ್ಯಾರಂಟಿ. ಇನ್ನು 10 ದಿನಗಳ ಕಾಲ ಇವೆಲ್ಲವನ್ನು ಸಹಿಸಿಕೊಳ್ಳಬೇಕು ಎಂದು ಚಂದ್ರಗುಪ್ತ ಅವರು ಹೇಳಿದ್ದಾರೆ.