ಕಾರ್ಮಿಕರು ಇದ್ದಲ್ಲಿಗೇ ಊಟದ ವ್ಯವಸ್ಥೆ: ಸಚಿವ ಸುಧಾಕರ್

Update: 2020-03-28 14:40 GMT

ಬೆಂಗಳೂರು, ಮಾ.28: ಕೂಲಿ ಕಾರ್ಮಿಕರು ಇದ್ದಲ್ಲಿಗೇ ಊಟದ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಮತ್ತಿತರ ಸೌಲಭ್ಯಗಳಿಗಾಗಿ ಕಾರ್ಮಿಕ ಇಲಾಖೆ ಸ್ಥಾಪಿಸಿರುವ ಶುಲ್ಕ-ರಹಿತ ದೂರವಾಣಿ 155214ಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಲೋಕಾರ್ಪಣೆ ಮಾಡಿದರು.  

ನಗರದ ವಾರ್ತಾ ಇಲಾಖೆಯಲ್ಲಿ ದೂರವಾಣೆಗೆ ಚಾಲನೆ ನೀಡಿದ ಅವರು, ಇಂದಿರಾ ಕ್ಯಾಂಟೀನ್ ಅಥವಾ ಸರಕಾರೇತರ ಸಂಘ-ಸಂಸ್ಥೆಗಳ ನೆರವಿನಿಂದ ಅವರು ಇದ್ದಲ್ಲೇ ಊಟದ ವ್ಯವಸ್ಥೆ ಮಾಡಲು ಸಹಾಯವಾಣಿ ನೆರವು ಒದಗಿಸಲಿದೆ. ಅಲ್ಲದೆ, ಬೇರೆ ಊರುಗಳಿಂದ ಬಂದು ನೆಲೆ ಇಲ್ಲದ ಜನರಿಗೆ ನೆಲೆ ಒದಗಿಸುವ ಪ್ರಯತ್ನವನ್ನೂ ಸಹಾಯವಾಣಿ ಮಾಡಲಿದೆ. ಜೊತೆಗೆ, ಸಾವು ಇನ್ನಿತರ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಬೇಕಾದ ಸಂಕಷ್ಟ ಎದುರಿಸುತ್ತಿರುವ ಕೂಲಿ ಕಾರ್ಮಿಕರಿಗೂ ಸಹಾಯವಾಣಿ ಸಹಾಯಕ್ಕೆ ಬರಲಿದೆ ಎಂದು ಅವರು ತಿಳಿಸಿದರು. 

ವೆಬ್‍ಸೈಟ್ ಲೋಕಾರ್ಪಣೆ: ಕೊರೋನ ಸೋಂಕನ್ನು ತಡೆಯುವುದಕ್ಕಾಗಿ ಸರಕಾರ ಕೈಗೊಳ್ಳುತ್ತಿರುವ ಕಾಯಕ್ರಮಗಳು, ಮುಖ್ಯಮಂತ್ರಿಯವರ ಸಂದೇಶ, ಸಹಾಯವಾಣಿ ಮಾಹಿತಿ, ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಕೋವಿಡ್-19ರ ಗುಣ-ಲಕ್ಷಣಗಳು, 21 ದಿನಗಳ ಲಾಕ್‍ಡೌನ್ ವಿವರ, ಸ್ವಯಂಸೇವಕರಾಗಿ ಸೇರಬಯಸುವವರಿಗೆ ಅವಕಾಶ ಹಾಗೂ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು,  ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಮತ್ತು ಬಲಿಯಾದವರ ಸಂಖ್ಯೆ  ಒಳಗೊಂಡಂತೆ ಕೋವಿಡ್-19 ದೃಢಪಟ್ಟಿರುವವರ ಅಂಕಿ-ಸಂಖ್ಯೆ ಕುರಿತ ತಾಜಾ ಮಾಹಿತಿ ಈ ವೆಬ್‍ಸೈಟ್‍ನಲ್ಲಿhttps://covid19.karnataka.gov.in/wordpress/ನಲ್ಲಿ ಲಭ್ಯವಿದೆ.

ಈ ವೇಳೆ ಮುಖ್ಯಮಂತ್ರಿಯವರ ಇ-ಗವರ್ನೆನ್ಸ್ ಸಲಹೆಗಾರ ಬೇಳೂರು ಸುದರ್ಶನ, ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರಕಾರದ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News