ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡದಂತೆ ಎಚ್ಚರವಹಿಸಿ: ಸಿ.ಟಿ.ರವಿ

Update: 2020-03-28 16:47 GMT

ಚಿಕ್ಕಮಗಳೂರು, ಮಾ. 28: ಕೊರೋನಾ ಸೋಂಕಿನಿಂದ ವಿಶ್ವವೇ ತತ್ತರಿಸಿದ್ದು, ನಮ್ಮ ಜಿಲ್ಲೆಗೆ ಯಾವುದೇ ರೀತಿಯಲ್ಲೂ ಸೋಂಕು ಹರಡದಂತೆ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕೊರೋನ ವೈರಸ್ ಹರಡದಂತೆ ಕ್ರಮಗಳನ್ನು ಕೈಗೊಂಡಿದ್ದು, ಆಶಾ ಕಾರ್ಯಕರ್ತೆಯರು, ತಹಶೀಲ್ದಾರ್‍ರರು ಹಾಗೂ ಆರೋಗ್ಯ ಅಧಿಕಾರಿಗಳನ್ನೊಳಗೊಂಡ ಅನೇಕ ಸಭೆಗಳನ್ನು ನಡೆಸಲಾಗಿದ್ದು,  ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ 87 ಜನರನ್ನು ಚಿಕಿತ್ಸೆಗೆ ಒಳಪಡಿಸಿದ್ದು, 3 ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿದ್ದು ಅವುಗಳು ಕೂಡ ನಕಾರತ್ಮಕ (ನೆಗೆಟಿವ್) ಎಂದು ದೃಢಪಟ್ಟಿವೆ. ಜಿಲ್ಲೆಯಲ್ಲಿ ಒಟ್ಟು 1177 ಎನ್-95 ಮಾಸ್ಕ್‍ಗಳಿದ್ದು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 351  ಎನ್-95 ಮಾಸ್ಕ್ ಗಳಿವೆ ಹಾಗೂ ತ್ರಿಬಲ್ ಎ ಒಟ್ಟು 17520 ಮಾಸ್ಕ್‍ಗಳು, ಜಿಲ್ಲೆಯಲ್ಲಿ ಒಟ್ಟು 17030 ಹ್ಯಾಂಡ್‍ ಗ್ಲೌಸ್ ಮತ್ತು ತಾಲ್ಲೂಕಿನಲ್ಲಿ ಖಾಸಗಿ ಹಾಗೂ ಜಿಲ್ಲಾಸ್ಪತ್ರೆಯನ್ನು ಒಳಗೊಂಡಂತೆ ಒಟ್ಟು 12 ವೆಂಟಿಲೇಟರ್‍ಗಳು ಇರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ 247 ಜನರು ಗೃಹ ನಿರ್ಬಂಧನದಲ್ಲಿದ್ದು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 87 ಜನರನ್ನು  ಗೃಹ ನಿರ್ಬಂಧನದಲ್ಲಿ ಇರಿಸಿ ಅಂತವರ ಮೇಲೆ ಹೆಚ್ಚಾಗಿ ನಿಗಾ ವಹಿಸಿ ಕೈಗೆ ಮುದ್ರೆ ಹಾಕಿ ಅವರ ಮನೆಗಳ ಮೇಲೆ ನೋಟಿಸ್‍ಗಳನ್ನು ಅಂಟಿಸಲಾಗಿದ್ದು ಬೇರೆ ಯಾರ ಜೊತೆ ಸಂಪರ್ಕ ದಲ್ಲಿ ಇರದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ 60 ಕ್ಕೂ ಹೆಚ್ಚು ನಿರ್ಗತಿಕರಿದ್ದು ಚಿಕ್ಕಮಗಳೂರು ತಾಲ್ಲೂಕಿನಲ್ಲಿ 34 ಜನರಿದ್ದಾರೆ. ಅವರಿಗೆ ನಗರದ ಎಐಟಿ ಬಳಿ ಇರುವ ಬಿ.ಸಿ.ಎಂ ಹಾಸ್ಟೆಲ್‍ನ ಒಂದು ಕೊಠಡಿಯಲ್ಲಿ ಇರಿಸಿ ಎನ್.ಜಿ.ಓ ಗಳ ಮುಖಾಂತರ ಊಟದ ವ್ಯವಸ್ಥೆಯ ಅವಕಾಶ ಕಲ್ಪಿಸಲಾಗಿದ್ದು, ಎಲ್ಲರಿಗೂ ಅಗತ್ಯವಾಗಿ ಆರೋಗ್ಯ ಚಿಕಿತ್ಸೆ ಮಾಡುವುದಾಗಿ ಹಾಗೂ ಅಲೇಮಾರಿಗಳು ಇದ್ದಲ್ಲಿ ಅವರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸುವುದಾಗಿ ತಿಳಿಸಿದರು. 

ಒಟ್ಟು ಜಿಲ್ಲೆಯಲ್ಲಿ 526 ನ್ಯಾಯಬೆಲೆ ಅಂಗಡಿಗಳಿದ್ದು, 2 ತಿಂಗಳ ಪಡಿತರವನ್ನು  ಒಟ್ಟಿಗೆ ನೀಡುವುದಾಗಿ ಆಹಾರ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು ಹಾಗೂ ಪಡಿತರ ನೀಡುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಬೆರಳಚ್ಚು ನೀಡುವಾಗ ಮತ್ತು ನೀಡಿದ ನಂತರದಲ್ಲಿ ಸ್ಯಾನಿಟೈಸರ್‍ಗಳನ್ನು ಬಳಸಿ, ಸಾರ್ವಜನಿಕರು ಅಂತರವನ್ನು ಕಾಯ್ದಿರಿಸುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರ ವಹಿಸಿ, ಜನದಟ್ಟಣೆ ಆಗದಂತೆ ನೋಡಿಕೊಳ್ಳಲು ಟೋಕನ್ ನೀಡಿ ಪಡಿತರವನ್ನು ವಿತರಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಾರ್ಚ್31 ರವರೆಗೆ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳ ಮನೆಗಳಿಗೆ ಹೋಗಿ ಆಹಾರ ಧಾನ್ಯವನ್ನು ನೀಡಲಿದ್ದಾರೆ ಎಂದರು.

ಮುಖ್ಯವಾಗಿ ರಸಗೊಬ್ಬರದ ಅಂಗಡಿ, ಕೃಷಿ ಬೆಳೆಗಳ ಔಷಧಿಗಳ ಅಂಗಡಿ ಹಾಗೂ ಕೆಲ ಮಳಿಗೆಗಳು, ಬೋರ್‍ವೆಲ್ ರೆಡಿ ಮಾಡುವು ಮೋಟರ್ ವೈಂಡಿಂಗ್ ಶಾಪ್‍ಗಳು ಹಾಗೂ ಎಲೆಕ್ಟ್ರಿಕಲ್ ಅಂಗಡಿಗಳನ್ನು ತೆರೆದು ಜನಸಂದಣಿಯಾಗದಂತೆ ಸಾಮಾಜಿಕ ಅಂತರವನ್ನು ಕಾಯ್ದಿರಿಸುವಂತೆ ಎಚ್ಚರ ವಹಿಸಿ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ದಿನಸಿ ಅಂಗಡಿ ಮಾಲೀಕರು ನಗರ ಹಾಗೂ ಪಟ್ಟಣದಿಂದ ದಿನಸಿಯನ್ನು ತೆಗೆದು ಕೊಂಡು ಹೋಗುವುದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ, ಲಗೇಜ್ ವಾಹನಗಳಲ್ಲೇ ದಿನಸಿ ತೆಗೆದುಕೊಂಡು ಹೋಗಬಹುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್. ನಾಗರಾಜ್,   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಮೇಶ್ ನಗರಸಭೆ ಪೌರಾಯುಕ್ತ ಚಂದ್ರಶೇಖರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್,  ಜಿಲ್ಲಾ ಸರ್ಜನ್ ಡಾ. ಕುಮಾರ್ ನಾಯ್ಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News