ಕೊರೋನ ಸೋಂಕು : ವದಂತಿಗಳು, ಮಾಧ್ಯಮ ವರದಿಗಳಿಗೆ ತಬ್ಲೀಗಿ ಜಮಾಅತ್ ಕೇಂದ್ರ ಕಚೇರಿಯಿಂದ ಸ್ಪಷ್ಟನೆ

Update: 2020-03-31 11:51 GMT

ಹೊಸದಿಲ್ಲಿ, ಮಾ.31: ದಿಲ್ಲಿಯ ತನ್ನ ಕೇಂದ್ರ ಕಚೇರಿಯಲ್ಲಿ ಸೇರಿರುವ ಜನಸಂದಣಿಯಿಂದ ಕೊರೋನ ಹರಡುತ್ತಿದೆ ಎಂಬ ವದಂತಿಗಳು ಹಾಗು ಕೆಲವು ಟಿವಿ ಚಾನಲ್ ಗಳ ವರದಿಗಳ ಬಗ್ಗೆ ತಬ್ಲೀಗಿ ಜಮಾಅತ್ ನ ಕೇಂದ್ರ ಕಚೇರಿ ಮರ್ಕಝ್ ನಿಝಾಮುದ್ದೀನ್ ಸ್ಪಷ್ಟನೆ ನೀಡಿದೆ.

ಹಠಾತ್ತನೆ ಘೋಷಿಸಲಾದ ಜನತಾ ಕರ್ಫ್ಯೂ ಮತ್ತು ಅದರ ಬೆನ್ನಿಗೆ ಪ್ರಕಟವಾದ ದಿಲ್ಲಿ ಸಿಎಂ ಅವರ ಲಾಕ್ ಡೌನ್ ಹಾಗು ಬಳಿಕ ಪ್ರಧಾನಿಯವರು ಘೋಷಿಸಿದ ಲಾಕ್ ಡೌನ್ ನಿಂದ ಮೊದಲೇ ಮರ್ಕಝ್ ನಲ್ಲಿದ್ದ ಜನರು ಅಲ್ಲಿಂದ ತಮ್ಮ ಸ್ಥಳಗಳಿಗೆ ವಾಪಸ್ ಹೋಗಲು ಸಾಧ್ಯವಾಗದೆ ಅನಿವಾರ್ಯವಾಗಿ ಉಳಿಯಬೇಕಾಯಿತು . ಆದರೂ ಸುಮಾರು 1500 ಜನರು ಸಾಧ್ಯವಿದ್ದ ವಾಹನಗಳಲ್ಲಿ ತಕ್ಷಣ ಕೇಂದ್ರ ಕಚೇರಿಯನ್ನು ಬಿಟ್ಟು ತೆರಳಿದ್ದಾರೆ. ಅನಿವಾರ್ಯವಾಗಿ ಹೋಗಲಾಗದೆ ಉಳಿದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು ಇಲ್ಲಿ ಉಳಿದಿದ್ದಾರೆ. ಅವರನ್ನೂ ಕಳಿಸಲು ಕೇಂದ್ರ ಕಚೇರಿಯೇ ವಾಹನ ವ್ಯವಸ್ಥೆ ಮಾಡಿ ಅದಕ್ಕೆ ಪಾಸ್ ನೀಡುವಂತೆ ವಿನಂತಿಸಿದರೂ ಈವರೆಗೆ ಅದು ಈವರೆಗೆ ಸಿಕ್ಕಿಲ್ಲ. ಸಿಕ್ಕಿದ್ದರೆ ಉಳಿದವರೂ ಇಲ್ಲಿಂದ ವಾಪಸ್ ಹೋಗಬಹುದಿತ್ತು. ಇಲ್ಲಿ ಉಳಿದವರು ವಾಪಸ್ ಹೋಗಲು ನಗರದ  ಅಲ್ಲಲ್ಲಿ ಬಸ್ ಸ್ಟಾಂಡ್ ಇತ್ಯಾದಿಗಳಲ್ಲಿ ಗುಂಪು ಸೇರದಂತೆ ಖಾತರಿಪಡಿಸಲು ಅವರನ್ನು ಇಲ್ಲೇ ಎಲ್ಲ ವೈದ್ಯಕೀಯ ನಿರ್ದೇಶನಗಳನ್ನು ಪಾಲಿಸುತ್ತಾ ಉಳಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮರ್ಕಝ್ ನಿಝಾಮುದ್ದೀನ್ ಸುಮಾರು 100 ವರ್ಷಗಳಿಂದ  ತಬ್ಲೀಗಿ ಜಮಾತ್ ನ ಅಂತರ್ ರಾಷ್ಟ್ರೀಯ ಕೇಂದ್ರ ಕಚೇರಿಯಾಗಿದೆ. ಇಲ್ಲಿ ವಿಶ್ವದೆಲ್ಲೆಡೆಯಿಂದ ಸಂದರ್ಶಕರು, ಅತಿಥಿಗಳು ಮುಂತಾದವರು ಪೂರ್ವ ನಿಗದಿತ ಗರಿಷ್ಟ ಐದು ದಿನಗಳ ಕಾರ್ಯಕ್ರಮಕ್ಕಾಗಿ ಬರುತ್ತಾರೆ. ಈ ಕಾರ್ಯಕ್ರಮಗಳು ಒಂದು ವರ್ಷ ಮೊದಲೇ ನಿಗದಿಯಾಗಿರುತ್ತವೆ. ಪ್ರಧಾನ ಮಂತ್ರಿಯವರು ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಿಸಿದಾಗ ಮರ್ಕಝ್ ನಲ್ಲಿ ಚಾಲ್ತಿಯಲ್ಲಿದ್ದ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಲಾಗಿದೆ. ಆದರೆ ಮಾರ್ಚ್ 21ರಂದು ಹಠಾತ್ತನೆ ರೈಲ್ವೆ ಸೇವೆ ಸ್ಥಗಿತಗೊಂಡಾಗ ದೊಡ್ಡ ಸಂಖ್ಯೆಯ ಸಂದರ್ಶಕರು ಅನಿವಾರ್ಯವಾಗಿ ಇಲ್ಲೇ ಉಳಿಯಬೇಕಾಯಿತು. ಮರ್ಕಝ್ ನಲ್ಲಿ ಪ್ರಧಾನಿ ಮನವಿಯಂತೆ ಜನತಾ ಕರ್ಫ್ಯೂವನ್ನು ಪಾಲಿಸಲಾಗಿದೆ. ಆದರೆ ಅದು ಮುಗಿಯುವ ಮೊದಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾರ್ಚ್ 23ರ ಬೆಳಗ್ಗೆ 6ರಿಂದ ಮಾರ್ಚ್ 31ರವರೆಗೆ ದಿಲ್ಲಿ ಲಾಕ್ ಡೌನ್ ಗೆ ಆದೇಶಿಸಿದರು. ಇದರಿಂದ ಮರ್ಕಝ್ ನಲ್ಲಿದ್ದ ಸಂದರ್ಶಕರಿಗೆ ತಮ್ಮ ಊರುಗಳಿಗೆ ಮರಳುವುದು ಅಸಾಧ್ಯವಾಯಿತು. ಆದರೂ ಸುಮಾರು 1500 ಮಂದಿ ಇದ್ದ ವ್ಯವಸ್ಥೆಯಲ್ಲಿ ಅಲ್ಲಿಂದ ಹೊರಟು ಹೋಗಿದ್ದಾರೆ. ಮಾರ್ಚ್ 23ರಂದು ಪ್ರಧಾನಿಯಿಂದ ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾಯಿತು. ಯಾರು ಎಲ್ಲಿದ್ದಾರೆ ಅಲ್ಲೇ ಇರಬೇಕು ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ ಅನಿವಾರ್ಯವಾಗಿ ಮರ್ಕಝ್ ನಲ್ಲಿದ್ದವರನ್ನು ಪ್ರಯಾಣಕ್ಕೆ ಅನುಮತಿ ಸಿಗುವವರೆಗೆ ಸೂಕ್ತ ವೈದ್ಯಕೀಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಕೊಂಡು  ಅಲ್ಲೇ ಉಳಿಸಿಕೊಳ್ಳಬೇಕಾಯಿತು.

ಮಾರ್ಚ್ 24ರಂದು ಮರ್ಕಝ್ ಅನ್ನು ಬಂದ್ ಮಾಡುವಂತೆ ಹಠಾತ್ತನೆ ಹಜ್ರತ್ ನಿಝಾಮುದ್ದೀನ್ ಪೊಲೀಸ್ ಠಾಣೆಯಿಂದ ನೋಟಿಸ್ ಬಂತು. ಅದಕ್ಕೆ ಅದೇ ದಿನ ಪ್ರತಿಕ್ರಿಯೆ ನೀಡಿ ಈಗಾಗಲೇ 1500 ಮಂದಿ ಹೊರಟು ಹೋಗಿರುವ ಮಾಹಿತಿ ನೀಡಿ, ಉಳಿದವರು ಹೋಗಲು 17 ವಾಹನಗಳ ಪಟ್ಟಿ ನೀಡಿ ಪಾಸ್ ನೀಡುವಂತೆ ಕೇಳಿಕೊಂಡೆವು. ಆದರೆ ಈವರೆಗೆ ಪಾಸ್ ಗಳು ಸಿಕ್ಕಿಲ್ಲ. ಮಾರ್ಚ್ 25ರಂದು ಮರ್ಕಝ್ ಗೆ ಭೇಟಿ ನೀಡಿದ ತಹಸೀಲ್ದಾರ್ ಹಾಗು ವೈದ್ಯಕೀಯ ತಂಡಕ್ಕೆ ಪೂರ್ಣ ಸಹಕಾರ ನೀಡಲಾಗಿದೆ. ಮಾರ್ಚ್ 26ರಂದು ಮರ್ಕಝ್ ಗೆ ಭೇಟಿ ನೀಡಿದ ಎಸ್ ಡಿ ಎಂ ಅವರು ನಮ್ಮನ್ನು ಕರೆದಾಗ ಅವರನ್ನು ಹೋಗಿ ಮಾತನಾಡಿ ವಾಹನಗಳಿಗೆ ಪಾಸ್ ಕೊಡಿಸುವಂತೆ ಮತ್ತೆ ಕೇಳಿಕೊಂಡೆವು. ಮಾರ್ಚ್ 27ರಂದು ಮರ್ಕಝ್ ನಿಂದ 6 ಮಂದಿಯನ್ನು ಅರೋಗ್ಯ ತಪಾಸಣೆಗಾಗಿ ಕರೆದೊಯ್ಯಲಾಯಿತು. ಮಾರ್ಚ್ 28ರಂದು ಎಸ್ ಡಿ ಎಂ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ತಂಡ ಬಂದು 33 ಮಂದಿಯನ್ನು ಅರೋಗ್ಯ ತಪಾಸಣೆಗೆಂದು ಕರೆದುಕೊಂಡು ಹೋಯಿತು. ಮರ್ಕಝ್ ತನ್ನಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ  ಅದೇ ದಿನ ಇದ್ದಕ್ಕಿದ್ದಂತೆ  ಲಜಪತ್ ನಗರ ಎಸಿಪಿ ಕಚೇರಿಯಿಂದ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು.

ಮಾರ್ಚ್ 30ರಂದು ಮರ್ಕಝ್ ನಲ್ಲಿ ಕೊರೋನ ಸೋಂಕಿತರು ಇದ್ದಾರೆ ಮತ್ತು ಇದರಿಂದ ಕೆಲವು ಮೃತಪಟ್ಟಿದ್ದಾರೆ ಎಂದು ವದಂತಿಗಳು ಹರಡಲು ಪ್ರಾರಂಭವಾದವು. ಮರ್ಕಝ್ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಹೇಳಿದ ವರದಿ ಪ್ರಕಟವಾಯಿತು. ಲಾಕ್ ಡೌನ್ ಘೋಷಣೆಯಾದ ದಿನದಿಂದ ಮರ್ಕಝ್ ಕೈಗೊಂಡ ಕ್ರಮಗಳು ಹಾಗು ನಂತರದ ಬೆಳವಣಿಗೆಗಳನ್ನು ಸಿಎಂ ಅವರ ಕಚೇರಿ ಕೇಳಿ ತಿಳಿದುಕೊಂಡಿದ್ದರೆ ಹಾಗೆ ಹೇಳುವ ಪ್ರಮೇಯವೇ ಬರುತ್ತಿರಲಿಲ್ಲ.

ಮರ್ಕಝ್ ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಸದಾ ದೇಶದ ಕಾನೂನನ್ನು ಪಾಲಿಸುತ್ತಾ ಬಂದಿದೆ. ಈಗಲೂ ಕೊರೋನ ನಿಯಂತ್ರಣಕ್ಕೆ ಸರಕಾರದ ಎಲ್ಲ ಕ್ರಮಗಳನ್ನು ಅದು ಸಂಪೂರ್ಣ ಬೆಂಬಲಿಸುತ್ತದೆ. ಮರ್ಕಝ್ ಕೇಂದ್ರ ಕಚೇರಿಯನ್ನು ಕೊರೋನ ನಿಯಂತ್ರಣಕ್ಕೆ ಬೇಕಾದ ಐಸೋಲೇಷನ್ ಕೇಂದ್ರವಾಗಿ ಬೇಕಾದರೂ ಸರಕಾರ ಬಳಸಬಹುದು ಎಂದು ಮರ್ಕಝ್ ಪ್ರಕಟಣೆಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News