ಚಿಕ್ಕಮಗಳೂರು: ರೈತರ ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ: ಸಚಿವ ಸಿ.ಟಿ ರವಿ

Update: 2020-04-16 16:51 GMT

ಚಿಕ್ಕಮಗಳೂರು, ಎ.16: ಲಾಕ್‍ಡೌನ್ ಆಗಿರುವ ಹಿನ್ನೆಲೆ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲ, ರೈತರು ಆಧಾರ್ ಮತ್ತು ಪಹಣಿಯ ಆಧಾರದಲ್ಲಿ ಕೆಲಸ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.

ತಾಲೂಕಿನ ಶಿರವಾಸೆ, ಮೇಲಿನ ಉಲುವತ್ತಿ, ಇನಾಂ ದತ್ತಾತ್ರೇಯ ಭಾಗದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕೊರೋನಾ ಸೋಂಕು ನಿಯಂತ್ರಣ ಕ್ರಮದ ಕುರಿತು ಅಂಗನನಾಡಿ ಹಾಗೂ ಆಶಾ ಕಾರ್ಯಕರ್ತೆಯರೊಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಜಿಲ್ಲೆಯ ಕಾಫಿ ತೋಟದ ಕೆಲಸಕ್ಕೆ ಹೋಗುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸವನ್ನು ನಿರ್ವಹಿಸಬಹುದು ಹಾಗೂ ಜಮೀನಿನ ಕೆಲಸಕ್ಕೆ ಹೋಗುವವರು ಕೂಡ ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್‍ಗಳನ್ನು ತೋರಿಸಿ ಕೃಷಿ ಕಾರ್ಯವನ್ನು ನಿರ್ವಹಿಸಬಹುದು ಎಂದರು.

ಜಿಲ್ಲೆಯ ಗಿರಿಶ್ರೇಣಿ ತಾಣಗಳಿಗೆ ಪ್ರವಾಸಿಗರು ಲಾಕ್‍ಡೌನ್ ಆಗುವ ಮುಂಚೆ ಅಧಿಕ ಸಂಖ್ಯೆಯಲ್ಲಿ ಬಂದು ಹೋಗಿರುವುದರಿಂದ ಗಿರಿಶ್ರೇಣಿ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು, ಯಾರಾದರು ಪ್ರವಾಸಿಗರು ಇದ್ದಲ್ಲಿ ಅಂತಹವರನ್ನು ಗುರುತಿಸಿ ಆಶಾ ಕಾರ್ಯಕರ್ತೆಯರಿಗೆ ಅಥವಾ ಪ್ರಾಥಮಿಕ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕು ಎಂದ ಅವರು, ಕೊರೋನಾ ಸೋಂಕು ಜಗತ್ತಿನಾದ್ಯಂತ ಆವರಿಸಿದ್ದು ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮನೆ-ಮನೆಗಳಿಗೆ ಭೇಟಿ ನೀಡಿ ಕೊರೋನಾ ಸೋಂಕಿನ ಕುರಿತು ಮಾಹಿತಿ ಸಂಗ್ರಹಿಸಿ, ಸೋಂಕಿನ ಬಗ್ಗೆ ಎಚ್ಚರ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಆಶಾ ಕಾರ್ಯಕರ್ತೆಯರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದವರಿದ್ದಲ್ಲಿ ಗುರುತಿಸಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ  ಅಂತವರಿಗೆ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿ ಹೋಮ್ ಕ್ವಾರಂಟೈನ್‍ಗಳಲ್ಲಿ ಇರುವಂತೆ ಸಲಹೆ ನೀಡಬೇಕು, ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಸುರಕ್ಷಾ ಸಾಧನಗಳಾದ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಬಳಸುವಂತೆ ತಿಳಿಸಿದರು.

ದೇಶದಾದ್ಯಂತ ಲಾಕ್‍ಡೌನ್ ಆಗಿರುವುದರಿಂದ ಉದ್ಯೋಗ ಕಳೆದುಕೊಂಡ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆಯಡಿ ಉಚಿತವಾಗಿ ಅಕ್ಕಿ, ಗೋಧಿ, ಬೇಳೆಯನ್ನು ವಿತರಿಸಲಾಗುತ್ತಿದೆ. ಅಲ್ಲದೇ ರಾಜ್ಯ ಸರ್ಕಾರ ಎರಡು ತಿಂಗಳ ಪಡಿತರವನ್ನು ವಿತರಿಸುತ್ತಿದೆ. ಅಲ್ಲದೇ ಪಡಿತರಕ್ಕೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೂ ಸಹ ಆಹಾರ ಧಾನ್ಯಗಳನ್ನು ವಿತರಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದ ಅವರು ಹೊರ ಜಿಲ್ಲೆಯವರಿಗೆ ಪಡಿತರ ವಿತರಣೆ ಮಾಡಬೇಕಾದರೆ ಒಟಿಪಿ ಕಡ್ಡಾಯ ಹಾಗೂ ವಿತರಣೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪಡಿತರವನ್ನು ಪಡೆದುಕೊಳ್ಳಬೇಕು ಎಂದರು.

ಸಂಕಷ್ಟ ಸ್ಥ್ಥಿತಿಯಲ್ಲಿರುವ ಬಡವರಿಗೆ ನೆರವಾಗಲು 1 ಲಕ್ಷದ 70 ಸಾವಿರ ಕೋಟಿ ಯೋಜನೆ ರೂಪಿಸಿ ಜನ್‍ಧನ್ ಯೋಜನೆ ಅಡಿ ಮಹಿಳೆಯರ ಖಾತೆಗೆ 500 ರೂ. ಹಾಗೂ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರ ಖಾತೆಗೆ 2000 ರೂ., ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ 2000 ರೂ. ಗಳನ್ನು ಖಾತೆಗೆ ಹಾಕಲಾಗುತ್ತಿದೆ ಎಂದ ಅವರು, ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಅರಸಿ ಬಂದವರಿಗೆ ವೈಯಕ್ತಿಕ ಕೆಲಸಗಳಾದ ಕೃಷಿಹೊಂಡ, ಇಂಗುಗುಂಡಿ, ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣದಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಂಡು ಕೆಲಸ ಮಾಡಲು ಅನುವು ಮಾಡಿಕೊಡುವುದರೊಂದಿಗೆ ಸಕಾಲದಲ್ಲಿ ಅವರಿಗೆ ಕೂಲಿ ಹಣವನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ, ವಿದ್ಯುತ್ ಸಂಪರ್ಕಕ್ಕೆ ಯಾವುದೇ ಕೊರತೆಯಾಗದಂತೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ  ಸಕಾಲಕ್ಕೆ ತ್ರಿ ಫೇಸ್ ವಿದ್ಯುತ್ ಅನ್ನು ಒದಗಿಸಬೇಕು. ಪ್ರತೀ ಗ್ರಾಮಗಳಲ್ಲಿಯೂ ಜನರು ವೈಯಕ್ತಿಕ ಹಾಗೂ ಸಮುದಾಯ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಗುಂಪು ಗುಂಪಾಗಿ ಸೇರದೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಕೇಂದ್ರ ಹಾಗೂ ರಾಜ್ಯ ಸರಕಾರಗಳೊಂದಿಗೆ ಕೈ ಜೋಡಿಸಿ ಆದೇಶಗಳನ್ನು ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಜಸಿಂತ ಅನಿಲ್ ಕುಮಾರ್, ತಹಶೀಲ್ದಾರ್ ನಂದಕುಮಾರ್, ತಾಪಂ ಇಒ ಎಚ್.ಡಿ ರೇವಣ್ಣ, ವಿವಿಧ ಗ್ರಾಮಪಂಚಾಯತ್ ಅಧ್ಯಕ್ಷರು, ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News