ಕನಿಷ್ಠ ಜ್ಞಾನ ಇಲ್ಲದವರಂತೆ ಮಾತನಾಡುವುದನ್ನು ಬಿಟ್ಟು ತೆಪ್ಪಗಿರಿ: ಶೆಟ್ಟರ್ ಗೆ ಕುಮಾರಸ್ವಾಮಿ ತಿರುಗೇಟು

Update: 2020-04-26 11:48 GMT

ಬೆಂಗಳೂರು, ಎ. 26: ಪಾದರಾಯನಪುರ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ವಿಷಯದಲ್ಲಿ ಎಡಬಿಡಂಗಿತನ ಮತ್ತು ರಾಜಕಾರಣ ಮಾಡಿದ್ದು ನಿಮ್ಮದೇ ಬಿಜೆಪಿ ಸರಕಾರ ಎಂಬುದು ನಿಮಗೆ ಗೊತ್ತಿಲ್ಲವೇ?' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಜಗದೀಶ್ ಶೆಟ್ಟರ್ ಅವರಿಗೆ ತಿರುಗೇಟು ನೀಡಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ರಾಮನಗರಕ್ಕೆ ಶಿಫ್ಟ್ ಮಾಡಲಾದ ಕೈದಿಗಳ ವಿಚಾರದಲ್ಲಿ ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸುವ ನೀವು ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದವರು. ಕನಿಷ್ಠ ಜ್ಞಾನ ಇಲ್ಲದವರಂತೆ ಮಾತನಾಡುವುದನ್ನು ಬಿಟ್ಟು ತೆಪ್ಪಗಿರಿ' ಎಂದು ಎಚ್ಚರಿಕೆ ನೀಡಿದ್ದಾರೆ.

'ನಾನು ಸಣ್ಣ ರಾಜಕಾರಣ ಮಾಡುತ್ತೇನೆ ಎಂದು ದೂಷಿಸುವ ನಿಮ್ಮ ಸರಕಾರ ಮತ್ಯಾಕೆ ಯು-ಟರ್ನ್ ತೆಗೆದುಕೊಂಡು ಕೈದಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಿತು? ಮೊದಲೇ ಈ ಕೆಲಸ ಮಾಡಿದ್ದರೆ, ನಿಮ್ಮ ಸರಕಾರಕ್ಕೊಂದು ಮರ್ಯಾದೆ ಇರುತ್ತಿತ್ತು' ಎಂದು ಕುಮಾರಸ್ವಾಮಿ, ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ರಾಮನಗರ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿ ಬಿಜೆಪಿ ಸರಕಾರ ಸಾಧಿಸಿದ್ದಾದರೂ ಏನನ್ನು? ರೋಗ ನಿಯಂತ್ರಿಸಬೇಕಾದ ಸರಕಾರವೇ ರೋಗ ಹಂಚಿದ್ದು, ಸರಕಾರದ ವೈಫಲ್ಯ ಅಲ್ಲದೆ ಮತ್ತೇನು? ನಿಮ್ಮದು ಸಣ್ಣ ರಾಜಕಾರಣ, ನನ್ನದಲ್ಲ' ಎಂದು ಕುಮಾರಸ್ವಾಮಿ, ಶೆಟ್ಟರ್ ಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News