ಎಸೆಸೆಲ್ಸಿ ಮಕ್ಕಳಿಗೆ ಪಾಠ: ವೈಎಸ್ವಿ ದತ್ತ ಕಾರ್ಯಕ್ಕೆ ಶಿಕ್ಷಣ ಸಚಿವರ ಶ್ಲಾಘನೆ
Update: 2020-05-15 12:32 GMT
ಬೆಂಗಳೂರು, ಮೇ 15: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೂಲಕ 10ನೇ ತರಗತಿ ಮಕ್ಕಳಿಗೆ ಪಠ್ಯಕ್ರಮದಂತೆ ಬೋಧಿಸಿದ ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತ ಅವರನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪತ್ರ ಬರೆದು ಶ್ಲಾಘಿಸಿದ್ದಾರೆ. ಈ ಕುರಿತು ಸಚಿವರ ಪತ್ರವನ್ನು ವೈ.ಎಸ್.ವಿ.ದತ್ತ ಹಂಚಿಕೊಂಡಿದ್ದಾರೆ.
ರಾಜ್ಯದ ಹಲವು ವಿದ್ಯಾರ್ಥಿಗಳು ‘ಕನ್ನಡದಲ್ಲೇ ಪಾಠ ಮಾಡಿ, ಕನ್ನಡದಲ್ಲೂ ಪಾಠ ಮಾಡುತ್ತಿರುವುದರಿಂದ ನಮಗೆ ಅನುಕೂಲವಾಗಿದೆ. ಹೆಚ್ಚು ಕನ್ನಡ ಪದಗಳನ್ನೇ ಬಳಸಿ’ ಎಂದು ಹೇಳುತ್ತಿದ್ದಾರೆ. ಇದು ಕನ್ನಡ ಮಾಧ್ಯಮದ ಅನಿವಾರ್ಯತೆ ಹಾಗೂ ಅಗತ್ಯತೆ ಕಡೆಗೆ ಚಿಂತಿಸುವಂತೆ ಮಾಡಿದೆ. ಶಿಕ್ಷಣದ ಕುರಿತು ಅಪಾರ ಅಭಿಮಾನ–ಕಾಳಜಿ ಹೊಂದಿರುವ ತಾವು ಈ ಕ್ಷೇತ್ರಕ್ಕೆ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಬೇಕೆಂದು ಹಾಗೂ ಮಕ್ಕಳಿಗೆ ಸಾಧ್ಯವಾದಷ್ಟು ವಿಷಯಗಳನ್ನು ತಿಳಿಸಿ ಅರಿವು ಹೆಚ್ಚಿಸಬೇಕೆಂಬ ನಿಮ್ಮ ಕಾಳಜಿ ಮೆಚ್ಚುವಂಥದ್ದು ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.