ದುಬೈಯಿಂದ ಬಂದವರೆಲ್ಲ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಲ್ಲ

Update: 2020-05-15 12:50 GMT
ಫೈಲ್ ಫೋಟೊ 

ದುಬೈಯಿಂದ ಮಂಗಳೂರಿಗೆ 179 ಪ್ರಯಾಣಿಕರನ್ನು ತುಂಬಿದ್ದ ವಿಮಾನವು ಮೇ 12 ರಂದು ರಾತ್ರಿ ಮಂಗಳೂರಿಗೆ ತಲುಪಿದೆ. ವಿಶೇಷ ಅಂದರೆ ಇದರಲ್ಲಿ ಬಂದಿರುವ 20 ಪ್ರಯಾಣಿಕರ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ವರದಿ ದೃಢವಾಗಿದ್ದು ವಿಶೇಷವಾಗಿದೆ.

ದುಬೈ ಎಂದಾಕ್ಷಣ ಅರಬ್ ರಾಷ್ಟ್ರ, ಮುಸ್ಲಿಂ ರಾಷ್ಟ್ರ ಎಂಬ ಕಲ್ಪನೆ ಸಾಮಾನ್ಯ. ಅಲ್ಲಿಂದ ಬಂದಂತಹ ಬಹುತೇಕ ಮಂದಿ ಮುಸ್ಲಿಮರು ಎಂಬ ಊಹೆ ಇಟ್ಟುಕೊಂಡು ಕೆಲವರು ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಇದೀಗಾಗಲೇ ಖಾಸಗಿ ಆಸ್ಪತ್ರೆಯೊಂದರಿಂದಾಗಿ ಜಿಲ್ಲಾದ್ಯಂತ ಕೊರೋನ ಹಬ್ಬಿದ್ದು, ಐದು ಜನರ ಸಾವಿಗೆ ಕಾರಣವಾದ ಸುದ್ದಿಯ ಬಿಸಿ ತಣಿಯುವ ಮೊದಲೇ ದುಬೈ ವಿಮಾನದಲ್ಲಿ ಬಂದ ದಕ್ಷಿಣ ಕನ್ನಡ ಮೂಲದ 14, ಉತ್ತರಕನ್ನಡದ 1 ಹಾಗೂ ಉಡುಪಿ ಜಿಲ್ಲೆಯ 5 ಪ್ರಯಾಣಿಕರಿಗೆ ಸೋಂಕು ಹರಡಿರುವುದು ದಿಗ್ಭ್ರಮೆ ಮೂಡಿಸಿದೆ.

ಮುಂದಿನ ದಿನಗಳಲ್ಲಿ ಹಿಂದಿನ ಎಲ್ಲಾ ಘಟನೆಗಳನ್ನು ಮರೆ ಮಾಚಲು ದುಬೈ ವಿಮಾನದ ನೆಪದಲ್ಲಿ "ದುಬೈ ಕೊರೋನ" ಅಥವಾ "ಅರಬ್ ಕೊರೋನ" ಎಂಬ ಲೇಬಲ್ ಬೀಳಬಾರದೆಂಬ ಹಿತದೃಷ್ಟಿಯಿಂದ ವಿಮಾನದಲ್ಲಿ ಬಂದಿರುವ ಪ್ರಯಾಣಿಕರ ಜಾತಿವಾರು ಲೆಕ್ಕಾಚಾರವನ್ನು ಇಲ್ಲಿ ಪ್ರಕಟಿಸಲಾಗಿದೆ.

ವಿಮಾನದಲ್ಲಿದ್ದ 179 ಸದಸ್ಯರಲ್ಲಿ 81 ಹಿಂದೂ ಬಾಂಧವರು, 58 ಮುಸ್ಲಿಮರು ಹಾಗೂ 40 ಕ್ರೈಸ್ತರು ಇದ್ದರು. ಆದರೆ ಇಷ್ಟು ಪ್ರಯಾಣಿಕರಲ್ಲಿ ಯಾರಿಗೆ ಕೊರೋನ ಪಾಸಿಟಿವ್ ಅನ್ನುವುದು ಪ್ರಕಟಿಸಬಾರದೆಂಬ ನಿಯಮವಿದೆ. ಪಾಸಿಟಿವ್ ಆದವರ ಹೆಸರು ಬಹಿರಂಗಪಡಿಸಬಾರದೆಂಬ ಆದೇಶವಿದೆ. ಕೊರೋನ ವೈರಸ್ ಜಾತಿ-ಧರ್ಮ, ವರ್ಣ-ಲಿಂಗ, ಮೇಲು-ಕೀಳು, ಬಡವ-ಶ್ರೀಮಂತ ನೋಡಿ ಬರುವುದಿಲ್ಲ ಎನ್ನುವುದು ಜಗತ್ತು ಸಾಬೀತು ಪಡಿಸಿದೆ. ಆದರೂ ಕೆಲವು ಮಾದ್ಯಮಗಳು ಈಗಾಗಲೇ ತಬ್ಲೀಗ್, ನಮಸ್ತೆ ಟ್ರಂಪ್, ಅಜ್ಮೀರ್ ಮೊದಲಾದ ಹೆಸರಿಟ್ಟು ಧರ್ಮದ ಲೇಪನ ನೀಡಿದ್ದು ದುರಂತ.

ಮುಂದಿನ ದಿನಗಳಲ್ಲಿ ರಮಝಾನ್ ಕೊರೋನ ಬರಬಾರದೆಂಬ ಹಿನ್ನೆಲೆಯಲ್ಲಿ ಇದೀಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ರಮಝಾನ್ ಹಬ್ಬದ ಶಾಪಿಂಗ್ ಮಾಡದೇ ಸ್ವಯಂ ಜಾಗೃತಿ ಮೂಡಿಸಿದ್ದಾರೆ. ಮುಸ್ಲಿಂ ವ್ಯಾಪಾರಸ್ಥರು ಹಬ್ಬ ಮುಗಿಯುವ ತನಕ ಸ್ವಯಂಪ್ರೇರಿತ ಬಂದ್ ಮಾಡಿ ಮಾದರಿಯಾಗಿದ್ದಾರೆ. ಇದೀಗ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಕೊರೋನ ವ್ಯಾಪಕವಾಗಿ ಹರಡಿದ್ದು ದೊಡ್ಡ ಸುದ್ದಿಯಾಗಿದೆ. ಅದರ ಬೆನ್ನಿಗೇ ದುಬೈ ಪ್ರಯಾಣಿಕರ ವರದಿಯೂ ಬಂದಿದೆ. ವಿಮಾನದಲ್ಲಿ ಏನೋ ಎಡವಟ್ಟು ನಡೆದಿದೆಯೋ ಅಥವಾ ವಿಮಾನದ ಹವಾನಿಯಂತ್ರಣದಲ್ಲಿ ಕೊರೋನ ಹರಡುತ್ತದೆಯೋ ಎಂಬ ಗೊಂದಲ ಮೂಡಿದೆ. ದುಬೈಯಿಂದ ಹೊರಡುವಾಗ ಪ್ರಯಾಣಿಕರನ್ನು ಪರೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿಲ್ಲ. ಒಟ್ಟಿನಲ್ಲಿ ನಾವು ಆದಷ್ಟು ಜಾಗೃತರಾಗೋಣ..

Writer - ರಶೀದ್ ವಿಟ್ಲ.

contributor

Editor - ರಶೀದ್ ವಿಟ್ಲ.

contributor

Similar News