ಜೂನ್ 14ರವರೆಗೆ ಮೀನುಗಾರಿಕೆಗೆ ಕೇಂದ್ರ ಸರಕಾರ ಅನುವು

Update: 2020-05-27 17:18 GMT

ಕಾರವಾರ, ಮೇ.27: ಕೇಂದ್ರ ಸರ್ಕಾರವು ಆಳ ಸಮುದ್ರ ಮೀನುಗಾರಿಕೆಗೆ ಜೂನ್ 1 ರಿಂದ ಜುಲೈ 31 ರ ವರೆಗೆ ಹೊರಡಿಸಿದ್ದ ನಿಷೇಧದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬದಲಾವಣೆ ಮಾಡಿದೆ. ಜೂನ್ 1 ರ ಬದಲಿಗೆ ಜೂನ್ 14 ರಿಂದ ನಿಷೇಧವನ್ನು ಮುಂದುವರಿಸಲಿದೆ. ಇದರಿಂದ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮೀನುಗಾರರಿಗೆ ಹೆಚ್ಚುವರಿಯಾಗಿ 14 ದಿನಗಳ ತನಕ ಮೀನುಗಾರಿಕೆಗೆ ಅವಕಾಶ ಸಿಕ್ಕಂತಾಗಿದೆ.

ದೇಶಾದ್ಯಂತ ಕೊರೋನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಲಾಕ್‍ಡೌನ್ ಸಂದರ್ಭದಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧಿಸಿದ್ದರಿಂದ ಮೀನುಗಾರರು ಭಾರಿ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಮುಂಗಾರು ಅವಧಿಯಲ್ಲಿ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ನಿಷೇಧದ ಆರಂಭವನ್ನು ಜೂನ್ 14ರವರೆಗೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಪರಿಷ್ಕೃತ ಆದೇಶದ ಪ್ರಕಾರ ಜುಲೈ 31ರವರೆಗೆ ಒಟ್ಟು 47 ದಿನಗಳ ವರೆಗೆ ಮೀನುಗಾರಿಕೆ ನಿಷೇಧವಿರುತ್ತದೆ. ಲಾಕ್‍ಡೌನ್ ಅವಧಿಯಲ್ಲಿ ಮಾರ್ಚ್ 24ರಿಂದ ಎ.10ವರೆಗೆ (17 ದಿನ) ಮೀನುಗಾರಿಕೆಗೆ ಅವಕಾಶ ಇರಲಿಲ್ಲ. ಆದ್ದರಿಂದ ಮತ್ಸ್ಯೋದ್ಯಮಕ್ಕೆ ಭಾರಿ ನಷ್ಟವಾಗಿತ್ತು. ಇದರಿಂದ ಇನ್ನು ಹದಿನೈದು ದಿನಗಳ ತನಕ ಮೀನುಗಾರಿಕೆ ಮುಂದುವರಿಸಲು ಅನುಮತಿ ನೀಡುವಂತೆ ಮೀನುಗಾರ ಸಂಘಟನೆಗಳು ಮನವಿ ಸಲ್ಲಿಸಿ ಸರ್ಕಾರವನ್ನು ಒತ್ತಾಯಿಸಿದ್ದವು.
ಈಗಾಗಲೇ ಅರಬ್ಬೀ ಸಮುದ್ರದಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಜೂನ್1 ರಿಂದ ಜುಲೈ 31ರವರೆಗೆ 61 ದಿನಗಳ ತನಕ ಸಂಪೂರ್ಣವಾಗಿ ನಿಷೇಧಿಸಿ, ಮಾರ್ಚ್ 20ರಂದು ಸರ್ಕಾರ ಆದೇಶ ನೀಡಿತ್ತು. ಈ ಅವಧಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. 

ಈ ಆದೇಶದ ಅನ್ವಯ 10 ಅಶ್ವಶಕ್ತಿ ಸಾಮರ್ಥ್ಯದ ಯಂತ್ರವನ್ನು ಬಳಸಿ ಸಾಂಪ್ರದಾಯಿಕವಾಗಿ ಮೀನುಗಾರಿಕೆ ನಡೆಸಬಹುದಾಗಿತ್ತು. ಆದರೆ ಆಳ ಸಮುದ್ರ ಯಾಂತ್ರೀಕೃತ ಮೀನುಗಾರ ಸಂಘಟನೆಗಳ ಒತ್ತಾಯದ ಮೇರೆಗೆ ಈ ಸಂಬಂಧ ತಜ್ಞರ ಸಮಿತಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಪಡೆದು ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಜೂನ್ 14 ರಿಂದ ಮೀನುಗಾರಿಕೆ ನಿಷೇಧಿಸಲು ನಿರ್ಣಯ ಕೈಗೊಂಡು, ಯಾಂತ್ರೀಕೃತ ಮೀನುಗಾರಿಕಾ ಬೋಟುಗಳಿಗೆ ಮೀನುಗಾರಿಕೆ ನಡೆಸಲು ಹೆಚ್ಚುವರಿಯಾಗಿ 14 ದಿನಗಳ ಕಾಲಾವಕಾಶ ನೀಡಿದೆ. ಪರಿಷ್ಕೃತ ಆದೇಶದ ಪ್ರಕಾರ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಜೂನ್ 14ರವರೆಗೂ ಮೀನುಗಾರಿಕೆಗೆ ಅವಕಾಶ ದೊರಕಿದಂತಾಗಿದೆ.

ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರರು ನಷ್ಟದಲ್ಲಿದ್ದಾರೆ. ಲಾಕ್ ಡೌನ್ ಪೂರ್ವದಲ್ಲೂ ಸುಮಾರು 15 ದಿನ ಸಾಗರಮಾಲಾ ಯೋಜನೆಗೆ ವಿರೋಧ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರರು ಪ್ರತಿಭಟನೆ ನಡೆಸಿದ್ದಾಗಲೂ ಜಿಲ್ಲೆಯಲ್ಲಿ ಮೀನುಗಾರಿಕೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಈ ಎಲ್ಲದರ ಪರಿಣಾಮ ಲಕ್ಷಾಂತರ ರೂ. ವ್ಯಯಿಸಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಮೀನು ಲಭ್ಯವಾಗದಿದ್ದರಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ, ಹೊರ ರಾಜ್ಯದ ಕಾರ್ಮಿಕರನ್ನು ಊರಿಗೆ ಕಳಿಸುವ ಪರಿಸ್ಥಿತಿ ಉದ್ಭವವಾಯಿತು. ಸದ್ಯ ಶೇ.10 ರಷ್ಟು ಮೀನುಗಾರಿಕಾ ಬೋಟುಗಳು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿವೆ.  

ಮೀನುಗಾರರು ಈಗಾಗಲೇ ಕಳೆದ ಮೀನುಗಾರಿಕಾ ಹಂಗಾಮಿನ ಬಳಿಕ ಅತೀವೃಷ್ಠಿ ಮಳೆ, ಪ್ರವಾಹದಿಂದ ಭಾರಿ ನಷ್ಟ ಅನುಭವಿಸಿದ್ದರು. ಪ್ರಸಕ್ತ ವರ್ಷ ಕೊರೋನ ವೈರಸ್ ತಡೆಯಲು ಲಾಕ್ ಡೌನ್ ಘೋಷಣೆಯಾದ ಬಳಿಕ ಸಮುದ್ರದಲ್ಲಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧದಿಂದ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈ ನಡುವೆ ಸಾಂಪ್ರದಾಯಿಕ, ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಸಹ ಹೇಳಿಕೊಳ್ಳುವಂತ ಲಾಭ ಮೀನುಗಾರರಿಗೆ ಆಗಿರಲಿಲ್ಲ. ಆನಂತರ ಕಳೆದ 16 ದಿನಗಳ ಹಿಂದಷ್ಟೇ ಯಾಂತ್ರಿಕೃತ ಮೀನುಗಾರಿಕೆಗೆ ಅವಕಾಶ ನೀಡಲಾಗಿತ್ತು. ಇದರಿಂದ ಸ್ಥಳೀಯ ಮೀನುಗಾರರು ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದರು. 

ಸರ್ಕಾರ ಪ್ರತಿವರ್ಷ ಜೂನ್ 1 ರಿಂದ ಜುಲೈ 31 ರ ವರೆಗೆ ಆಳ ಸಮುದ್ರ ಮೀನುಗಾರಿಕೆಯನ್ನು ನಿಷೇಧಿಸುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ ಎನ್ನಲಾಗುತ್ತದೆ. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ, ಮರಿ ಹಾಕಲು ಆಳ ಸಮುದ್ರದಿಂದ ಮೀನು ಗುಂಪು ಗುಂಪಾಗಿ ಕಡಲತೀರದತ್ತ ಬರುತ್ತವೆ. ಸಮುದ್ರ ಮತ್ತು ನದಿಗಳ ಸಂಗಮ ಪ್ರದೇಶ ಹಾಗೂ ಹೊಂಡ, ಕಲ್ಲುಗಳ ಸಂದುಗಳಲ್ಲಿ ಮೀನು ಸಂತಾನೋತ್ಪತ್ತಿ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಮೀನುಗಳ ಸಂರಕ್ಷಣೆ ಉದ್ದೇಶದಿಂದ ಮೀನು ಹಿಡಿಯುವುದನ್ನು ಸರ್ಕಾರ ಎರಡು ತಿಂಗಳ ಕಾಲ ನಿಷೇಧಿಸುತ್ತದೆ. ಆದರೆ ಸರ್ಕಾರ ಜೂನ್ 14 ರ ವರೆಗೆ ಮೀನುಗಾರಿಕೆ ನಿಷೇಧ ಅವಧಿ ವಿಸ್ತರಿಸಿರುವುದರಿಂದ ಮೀನುಗಳ ಸಂತಾನೋತ್ಪತ್ತಿಗೆ ತೊಡಕಾಗಬಹುದು. ಈ ವೇಳೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವುದು ಬಹಳ ಅಪಾಯಕಾರಿಯಾಗಿರುತ್ತದೆ. ಬೋಟುಗಳು ಮುಳುಗಡೆಯಾಗಿ ಜೀವ ಕಳಕೊಂಡ ಅದೆಷ್ಟೋ ಘಟನೆಗಳು, ಈ ಹಿಂದೆ ನಡೆದಿವೆ ಎನ್ನುತ್ತಾರೆ ಮೀನುಗಾರರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News