ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅರಿಶಿನ ಮಿಶ್ರಿತ ಹಾಲು ಬಿಡುಗಡೆ: ಕೆಎಂಎಫ್‍ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Update: 2020-06-01 18:30 GMT

ಬೆಂಗಳೂರು, ಜೂ.1: ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂನ್ 1 ರಂದು ರಾಜ್ಯ ಹಾಲು ಮಹಾಮಂಡಳಿಯು ಕೊರೋನದಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ಅವರಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಅರಿಶಿನ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೋನ ದಾಳಿ ಮಾಡಿರುವ ಈ ಸಂದರ್ಭದಲ್ಲಿ ಜನರು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿ ಎಂಬ ಕಾರಣಕ್ಕೆ ಕೆಎಂಎಫ್ ಅರಿಶಿನಯುಕ್ತ ಹಾಲನ್ನು ಬಿಡುಗಡೆಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಕೆಎಂಎಫ್‍ನ ನಾನಾ ಶ್ರೇಣಿಯ ನಂದಿನಿ ಉತ್ಪಾದನೆಯ ಮೊಬೈಲ್ ಪಾರ್ಲರ್ ವ್ಯಾನ್‍ಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಇಲ್ಲಿ ಕೆಎಂಎಫ್ ತಯಾರಿಸುತ್ತಿರುವ ನಂದಿನಿ ಹಾಲು, ಮೊಸರು, ಐಸ್‍ಕ್ರೀಮ್, ಗಟ್ಟಿ ಹಾಲು ಸೇರಿದಂತೆ ಇತರೆ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಗ್ರಾಹಕರ ಲಭ್ಯತೆ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಭಾಗಗಳಲ್ಲಿಯೂ ನಂದಿನಿ ಮೊಬೈಲ್ ಪಾರ್ಲರ್ ವ್ಯಾನ್‍ಗಳನ್ನು ವಿಸ್ತರಿಸುವ ಚಿಂತನೆ ಕೆಎಂಎಫ್ ಹೊಂದಿದೆ. ವಿಶ್ವ ಹಾಲು ದಿನವನ್ನು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು 2001 ರಿಂದ ಪ್ರತಿವರ್ಷ ಜೂನ್ 1 ರಂದು ಆಚರಿಸಿಕೊಂಡು ಬರುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ವಿಶ್ವದೆಲ್ಲೆಡೆ ಹಾಲು ಮತ್ತು ಕೈಗಾರಿಕೆ ಜೊತೆಗೆ ಅದರ ಮಹತ್ವವನ್ನು ಪಸರಿಸುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಕೂಡ ಪ್ರತಿಯೊಬ್ಬ ರೈತರು, ಗ್ರಾಹಕರಿಗೆ ಜನಸ್ನೇಹಿಯಾಗಿ ಇಂತಹ ಕಾರ್ಯವನ್ನು ಮಾಡುತ್ತ ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ವಿಶ್ವದ ನೂರು ಕೋಟಿಗೂ ಅಧಿಕ ಜನರು ಹೈನುಗಾರಿಕೆಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈಗಲೂ ಅದನ್ನೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಿತ್ಯ ವಿಶ್ವದಾದ್ಯಂತ ಕನಿಷ್ಠ 600 ಕೋಟಿ ಜನರು ಹಾಲಿನ ವಿವಿಧ ರೂಪಗಳಲ್ಲಿರುವ ವಸ್ತುಗಳನ್ನು ಸೇವಿಸುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಹಾಲನ್ನು ಸೇವನೆ ಯೋಗ್ಯ ಎಂಬ ದೃಷ್ಟಿ ಅವರಲ್ಲಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಹಾಲು ಸೇವನೆಯಿಂದ ಸಾಕಷ್ಟು ಲಾಭವಿದ್ದು, ಸ್ನಾಯು ಬೆಳವಣಿಗೆ ಪ್ರವರ್ಧಕವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇರುಳು ಗಣ್ಣಿನ ಸಮಸ್ಯೆ ಇರುವವರಿಗೆ ವಿಟಮಿನ್ ಎ ಒದಗಿಸುತ್ತದೆ. ಐ12 ಇರುವುದರಿಂದ ದೈಹಿಕ ಬೆಳವಣಿಗೆಗೆ ಇದು ಪೂರಕವಾಗಿದೆ. ಜೊತೆಗೆ ಜೀರ್ಣಕ್ರಿಯೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಒಣಗಿದ ಚರ್ಮಕ್ಕೆ ಇದು ಉತ್ತಮ ಮದ್ದಾಗಿದೆ. ಮೆದುಳಿನ ಕಾರ್ಯಶಕ್ತಿಯನ್ನು ವೃದ್ಧಿಸುತ್ತದೆ. ಜೊತೆಗೆ ಮೂಳೆಗಳಿಗೆ ಕ್ಯಾಲ್ಸಿಯಂ ಒದಗಿಸುತ್ತದೆ. ಹಾಲು ಆಮ್ಲೀಯ ವೇದನೆಗೆ ಪರಿಹಾರವಾಗಿದೆ. ಹೀಗಾಗಿ ಹಾಲಿನಿಂದ ಇಷ್ಟೆಲ್ಲ ಅನುಕೂಲಗಳಿರುವುದರಿಂದ ಜನರಿಗೆ ಉತ್ತಮ ಆರೋಗ್ಯದಾಯಕ ವಸ್ತುವಾಗಿದೆ ಎಂದು ಅವರು ವಿವರಿಸಿದ್ದಾರೆ.

ಇಷ್ಟೆಲ್ಲ ಅನುಕೂಲವಿರುವ ಈ ಹಾಲನ್ನು ಅಭಿವೃದ್ಧಿಶೀಲ ದೇಶಗಳಲ್ಲಿ ಹಾಲಿನ ಬಳಕೆ ಮತ್ತು ಸದುಪಯೋಗವನ್ನು ಆಹಾರ ಪದ್ಧತಿಯಲ್ಲಿ ಬಳಸುವ ಕ್ರಮ ಕೈಗೊಳ್ಳುವ ಉದ್ಧೇಶದಿಂದ ಆಹಾರ ಮತ್ತು ಕೃಷಿ ಸಂಸ್ಥೆಯು ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯನ್ನು ಪ್ರಾರಂಭ ಮಾಡಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ವಿಶ್ವದ ಅನೇಕ ರಾಷ್ಟ್ರಗಳು ಹಾಲು ದಿನವನ್ನು ಆಚರಣೆ ಮಾಡುತ್ತಿವೆ. ಕೆಎಂಎಫ್ ಕೂಡ ಪ್ರತಿವರ್ಷ ಹಾಲು ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಹಾಲಿನ ಮಹತ್ವವನ್ನು ಗ್ರಾಹಕರಿಗೆ ತಿಳಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಅದೇ ರೀತಿ ರಾಜ್ಯ ಸರಕಾರದ ಕ್ಷೀರಭಾಗ್ಯ ಯೋಜನೆ ಕೂಡ ವಿಶ್ವ ಹಾಲು ದಿನಾಚರಣೆ ಎಂದೆ ಜಾರಿಗೊಳಿಸಿದ್ದು ಸ್ಮರಣೀಯವಾಗಿದೆ. ಈ ಮೂಲಕ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಹಿಂದಿನ ಕಾಲದಿಂದಲೂ ಹಾಲಿಗೆ ವೈಶಿಷ್ಟ್ಯಪೂರ್ಣ ಸ್ಥಾನಮಾನವಿದೆ. ಅದರಂತೆ ಸಾಕಷ್ಟು ಜನರು ತತ್ವಯುತವಾಗಿ, ಆರೋಗ್ಯಯುತವಾದ ಬದುಕನ್ನು ನಡೆಸುತ್ತಿದ್ದಾರೆ. ಹೀಗಾಗಿ ಹಾಲಿನ ದಿನಾಚರಣೆಯ ಈ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News