ಹುಬ್ಬಳ್ಳಿ: ಪ್ಲಾಸ್ಮಾ ಚಿಕಿತ್ಸೆ ಪಡೆದ ಕೊರೋನ ಸೋಂಕಿತನ ಆರೋಗ್ಯದಲ್ಲಿ ಚೇತರಿಕೆ; ಕಿಮ್ಸ್ ನಿರ್ದೇಶಕ

Update: 2020-06-02 11:46 GMT

ಹುಬ್ಬಳ್ಳಿ, ಜೂ.2: ಹುಬ್ಬಳ್ಳಿ ನಗರದ ವಿನಾಯಕ ಕಾಲನಿಯ ಕೊರೋನ ಸೋಂಕಿತ ವ್ಯಕ್ತಿಗೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ. ಆ ವ್ಯಕ್ತಿ ಗುಣಮುಖನಾಗುತ್ತಿದ್ದು, ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಮೊದಲ ಪ್ರಕರಣವಿದು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೋಂಕಿನಿಂದ ಮೇ ಮೊದಲ ವಾರದಲ್ಲಿ ಚೇತರಿಸಿಕೊಂಡಿದ್ದ ಹುಬ್ಬಳ್ಳಿಯ(ಪಿ-363) ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ತೆಗೆದು ಮಹಾರಾಷ್ಟ್ರದಿಂದ ಮರಳಿದ್ದ(ಪಿ-2710) ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ.
ಈ ವ್ಯಕ್ತಿಗೆ ಆರಂಭದಲ್ಲಿ ಬಹಳಷ್ಟು ಉಸಿರಾಟದ ತೊಂದರೆಯಿತ್ತು. ಮೇ 29 ಹಾಗೂ 30ರಂದು ಪ್ಲಾಸ್ಮಾ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಉಸಿರಾಟದ ಸಮಸ್ಯೆ ಕಡಿಮೆಯಾಗಿದೆ. ಆ ವ್ಯಕ್ತಿಗೆ 64 ವರ್ಷವಾದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಶೇ.40ರಷ್ಟು ಗುಣಮುಖರಾಗಿದ್ದು, ನಾಲ್ಕೈದು ದಿನಗಳಲ್ಲಿ ಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು. 

11 ಜನ ಚೇತರಿಕೆ: ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 11 ಜನ ಗುಣಮುಖರಾಗಿದ್ದು, ಅವರನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News