ಸಾರ್ವಜನಿಕ ಸಹಭಾಗಿತ್ವದಲ್ಲಿ ಗೋಬರ್ ಧನ್ ಯೋಜನೆ ಅನುಷ್ಠಾನಕ್ಕೆ ಉತ್ತರ ಕನ್ನಡ ಜಿ.ಪಂ. ಸಜ್ಜು

Update: 2020-06-03 17:59 GMT

ಕಾರವಾರ,ಜೂ.3: ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೋಬರ್ ಧನ್ ಯೋಜನೆಯನ್ನು ಸಾರ್ವಜನಿಕ ಸಹಭಾಗಿತ್ವದ ಮೂಲಕ ಮೊದಲ ಹಂತದ ಯೋಜನೆ ಅನುಷ್ಠಾನಗೊಳಿಸಲು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸಜ್ಜಾಗಿದೆ.

ಸ್ವಚ್ಛ ಭಾರತ ಮಷೀನ್ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗ ಪ್ರಾಯೋಗಿಕವಾಗಿ ಶಿರಸಿ ತಾಲೂಕಿನ ವಾದಿರಾಜ ಮಠ ಹಾಗೂ ಸಿದ್ದಾಪುರ ತಾಲೂಕಿನ ಭಾನ್ಕುಳಿ ಮಠದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಭಾನ್ಕುಳಿ ಮಠದಲ್ಲಿ ಚಾಲನೆ ನೀಡಲಾಗಿದೆ.

ಗೋಬರ್ ಧನ್ ಯೋಜನೆಯ ಪರಿಕಲ್ಪನೆ ಅಂದರೆ ಸಮುದಾಯಕ್ಕೆ ನೆರವಾಗಬೇಕು ಎಂಬ ಉದ್ದೇಶದಿಂದ ಅನುಷ್ಠಾನಕ್ಕೆ ತರಲಾಗುತ್ತಿದೆ. ಜಾನುವಾರು ಸೆಗಣಿ, ಹಸಿ ಕಸ ಉತ್ಪತ್ತಿಯಾಗುವ ಮಠ, ಗೋಶಾಲೆ, ಅನ್ನ ಛತ್ರ ಇಂತಹ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುತ್ತಿದೆ.

ಹೆಚ್ಚು ಸೆಗಣಿ, ಹಸಿ ಕಸ ದೊರಕುವ ಪ್ರದೇಶದಲ್ಲಿ ತ್ಯಾಜ್ಯದ ಪ್ರಮಾಣವನ್ನು ಆಧರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಹೆಚ್ಚು ತ್ಯಾಜ್ಯ ದೊರಕುವ ಸ್ಥಳದಲ್ಲಿ 60 ಕ್ಯೂಬಿಕ್ ಮೀಟರ್ ಗಾತ್ರದ ಸುಮಾರು 14.5 ಲಕ್ಷ ರೂಪಾಯಿ ವೆಚ್ಚದ ಗೋಬರ್ ಗ್ಯಾಸ್ ಘಟಕಕ್ಕೆ ಯೋಜನೆ ರೂಪಿಸಲಾಗಿದೆ. ಶೇ. 50:50 ರ ಅನುಪಾತದಲ್ಲಿ ಯೋಜನಾ ವೆಚ್ಚವನ್ನು ಭರಿಸಲಾಗುತ್ತದೆ. ಈ ಯೋಜನೆಯನ್ನು ರಾಜ್ಯದಲ್ಲಿ ಹೊಸದಾಗಿ ಜಾರಿಗೆಗೊಳಿಸಲಾಗಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪಾದನೆಗೆ ಒತ್ತು ನೀಡಲು ಜಿಲ್ಲಾ ಪಂಚಾಯತ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಭಾನ್ಕುಳಿ ಮತ್ತು ವಾದಿರಾಜ ಮಠದಲ್ಲಿ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಗೋಬರ್ ಗ್ಯಾಸ್ ಅನ್ನು ಇನ್ನಷ್ಟು ಹೆಚ್ಚು ಪ್ರಚಲಿತಕ್ಕೆ ತರುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಪ್ರಯತ್ನ ನಡೆಸಿದೆ.

ರಾಜ್ಯದಲ್ಲಿ ಮಾದರಿ ಯೋಜನೆ: ಇನ್ನು ಹೊಸದಾಗಿ ಜಾರಿಗೆ ತಂದಿರುವ ಗೋಬರ್ ಧನ್ ಯೋಜನೆ ರಾಜ್ಯದಲ್ಲಿ ಮಾದರಿಯಾಗಿದೆ. ಈ ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದರಿ ರೂಪದಲ್ಲಿ ಜಾರಿಗೊಳಿಸಲು ಜಿಲ್ಲಾ ಪಂಚಾಯತ್ ಮುಂದಾಗಿದೆ. ಪಿಪಿಪಿ ಮಾದರಿಯಲ್ಲಿ ರೂಪಿಸಿದ ಈ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಲಿದ್ದು, ರಾಜ್ಯದ ಪ್ರತಿ ತಾಲೂಕಿನಲ್ಲಿ 10 ನೂತನ ಘಟಕ ನಿರ್ಮಿಸಲು ಸ್ವಚ್ಛ ಭಾರತ ಮಷೀನ್ ಯೋಜನೆಯ ಆಯುಕ್ತರು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಗಳಿಗೆ ಈಗಾಗಲೇ ಸಲಹೆ ನೀಡಿದ್ದಾರೆ. 15ನೇ ಹಣಕಾಸಿನ  ಯೋಜನೆಯ ಅನುದಾನದಡಿ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲುಯೋಜನೆಯನ್ನು ರೂಪಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ. ರೋಶನ್ ತಿಳಿಸಿದ್ದಾರೆ.

ಪಶು ಸಂಗೋಪನೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಜೊತೆಗೆ ಇದರ ಉಪ ಉತ್ಪನ್ನಗಳ ಸದ್ಬಳಕೆಗೆ ಇದು ಸಹಕಾರಿಯಾಗುತ್ತದೆ. ಸೆಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದನೆ ಮಾಡಿ ಇದನ್ನು ಅಡುಗೆ ತಯಾರಿಸಲು ಬಳಕೆ ಮಾಡಿದ್ದಲ್ಲಿ ಎಲ್ಪಿಜಿ ಗ್ಯಾಸ್ ಅವಲಂಬಿಸುವುದು ಕಡಿಮೆಯಾಗಲಿದೆ. ಮಠ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸುವ ಅನ್ನಛತ್ರಗಳಲ್ಲಿ ಈ ಪುನರುತ್ಪಾದಿನ ಗೋಬರ್ ಗ್ಯಾಸ್ ಬಳಕೆ ಹೆಚ್ಚಾಗಬೇಕು. ಇದು ಸರಿಯಾಗಿ ಅನುಷ್ಠಾನಕ್ಕೆ ಬಂದಲ್ಲಿ ಎಲ್ ಪಿಜಿ ಗ್ಯಾಸ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ರಾಜ್ಯದಲ್ಲಿ ಈ ಯೋಜನೆ ಮಾದರಿಯಾಗಲಿದೆ. 

ಕೇಂದ್ರದ ಸರಕಾರದ ಗೋಬರ್ ಧನ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲು ಯೋಜನೆ ಅನುಷ್ಠಾನಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ತರಲಾಗುವುದು. 15ನೇ ಹಣಕಾಸು ಯೋಜನೆಯ ಅನುದಾನದಡಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
-ಎಂ. ರೋಷನ್, ಜಿಪಂ ಸಿಇಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News