ವಿಜಯಪುರ: ಚನ್ನಮ್ಮ ವೃತ್ತಕ್ಕೆ ಕೋಟಿ ರೂ. ಬೆಲೆ ಬಾಳುವ ಆಸ್ತಿ ದಾನ ಮಾಡಿದ ಶೌಕತ್ ಅಲಿ

Update: 2020-06-16 12:53 GMT

ವಿಜಯಪುರ, ಜೂ.16: ವಿಜಯಪುರ ಜಿಲ್ಲೆಯ ಸಿಂದಗಿಯ ಚನ್ನಮ್ಮ ವೃತ್ತಕ್ಕೆ ಶೌಕತ್ ಅಲಿ ಸುಂಬಡ್ ಎನ್ನುವವರು ತಮ್ಮ ಜಮೀನು ನೀಡಿ, ಈ ನೆಲದ ನಿಜ ಸೌಹಾರ್ದತೆ ಮೆರೆದಿದ್ದಾರೆ.

ಶೌಕತ್ ಅಲಿ ಅವರು ಕೋಟಿ ಬೆಲೆ ಬಾಳುವ ಜಾಗವನ್ನು ಚನ್ನಮ್ಮ ವೃತ್ತಕ್ಕೆ ದಾನವಾಗಿ ನೀಡಿದ್ದು, ಆ ಜಾಗದಲ್ಲಿ ಕೋಟೆ ಮಾದರಿಯ ಕಟ್ಟಡದ ಜೊತೆಗೆ ಕಿತ್ತೂರು ಚನ್ನಮ್ಮಳ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ.

ಚನ್ನಮ್ಮ ವೃತ್ತಕ್ಕೆ ಚಾಲನೆ ನೀಡಿದ ಪಂಚಮಸಾಲಿ ಪೀಠದ ಬಸವಜಯ ಮೃತ್ಯಂಜಯ ಶ್ರೀಗಳು, ಶೌಕತ್ ಅಲಿ ಸುಂಬಡ್ ಅವರನ್ನು ಸನ್ಮಾನಿಸಿದರು. ಬಳಿಕ ಬಸವಜಯ ಶ್ರೀಗಳು ಮಾತನಾಡಿ, ಲಿಂಗಾಯತರೊಂದಿಗೆ ಮುಸ್ಲಿಮರು ಎಲ್ಲ ಕಡೆ ಅನ್ಯೋನ್ಯವಾಗಿರುವುದಕ್ಕೆ ಇದು ದೊಡ್ಡ ಸಾಕ್ಷಿ. ಮಕ್ಕಳು, ಪತ್ನಿಗೆ ಆಸ್ತಿ ಮಾಡಿಟ್ಟರೆ ಹೆಸರು ಉಳಿಯಲ್ಲ. ಹೀಗೆ ಸಮಾಜಕ್ಕೆ ಸ್ಪಂದಿಸಿದರೆ ಅಜರಾಮರರಾಗುತ್ತೀರಿ ಎಂದು ಹೇಳಿದರು.

ಶೌಕತ್ ಅಲಿ ಸುಂಬಡ್ ಅವರು ಮಾತನಾಡಿ, ಎಲ್ಲರೂ ಕೂಡಿ ಬಾಳುವುದೇ ನಿಜವಾದ ಧರ್ಮ. ಅದೇ ಆಶಯಕ್ಕೆ ಜಮೀನು ನೀಡಿರುವೆ. ಹಿಂದೂ ಮುಸ್ಲಿಮರು ಪ್ರೇಮದಿಂದ ಇರಬೇಕು ಎಂದು ಭಾವುಕವಾಗಿ ನುಡಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಸಿ.ಮನಗೂಳಿಯವರ ಪುತ್ರ ಅಶೋಕ ಮನಗೂಳಿ, ಪತ್ರಕರ್ತ ಶಿವಕುಮಾರ್ ಉಪ್ಪಿನ, ರಫೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News