ಕಳಪೆ ಬೀಜ ಮಾರಾಟ ಮಾಡುವವರ ಕತೆ ಮುಗಿಸುತ್ತೇವೆ: ಸಚಿವ ಬಿ.ಸಿ.ಪಾಟೀಲ್

Update: 2020-06-19 12:52 GMT

ಕೊಪ್ಪಳ, ಜೂ.19: ರೈತರಿಗೆ ಒಳ್ಳೆಯದು ಮಾಡುವುದೇ ನನ್ನ ಕರ್ತವ್ಯ. ನಕಲಿ ಕಳಪೆ ಬೀಜ ಗೊಬ್ಬರ ಮಾರಾಟಗಾರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒತ್ತಡಕ್ಕೆ ಮಣಿಯುವುದು ತಾಯಿಯೆ ಮಗುವಿಗೆ ವಿಷವುಣಿಸಿದಂತೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಕೊಪ್ಪಳದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಪೆ ಬೀಜ ಮಾರಾಟ ಮಾಡುವ ದೊಡ್ಡ ಜಾಲವನ್ನು ನಾವು ಬೇಧಿಸಿದ್ದೇವೆ. ಇನ್ನೂ ಬೇಧಿಸುವುದು ಬಹಳಷ್ಟಿದೆ ಎಂದರು.

ಕಳಪೆ ಬೀಜ ಮಾರಾಟ ಮಾಡುವವರ ಕತೆ ಮುಗಿಸುತ್ತೇವೆ. ಕಳಪೆ ಬೀಜ ಮಾರಾಟದವರ ಒತ್ತಡ ತಂತ್ರಗಳಿಗೆ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ಕಳಪೆ ಬೀಜ ಮಾರಾಟವನ್ನು ನಾವೇ ಪತ್ತೆ ಮಾಡುತ್ತಿದ್ದೇವೆ. ಇಷ್ಟು ವರ್ಷ ಅದು ಪತ್ತೆಯಾಗಿದ್ದಿಲ್ಲ ಎಂದು ಅವರು ಹೇಳಿದರು.

ಕಳಪೆ ಬೀಜದ ಬಗ್ಗೆ ಯಾರೂ ಕಾಳಜಿ ವಹಿಸಿರಲಿಲ್ಲ. ತಾವು ಕೃಷಿ ಸಚಿವರಾದ ಬಳಿಕ ಖುದ್ದಾಗಿ ಇಂತಹದೊಂದು ಅಭಿಯಾನ ಆರಂಭಿಸಲಾಗಿದ್ದು, ರಾಯಚೂರು, ಬೀದರ್, ಹಾವೇರಿ ಸೇರಿದಂತೆ ಇಲ್ಲಿಯವರೆಗೂ ಸುಮಾರು 15 ಕೋಟಿ ರೂ.ಮೊತ್ತದ ಕಳಪೆ ಬೀಜ ಪತ್ತೆ ಮಾಡಲಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಅನ್ನ ಕೊಡುವ ರೈತನಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಸಮಯದಲ್ಲಿ ಕಳಪೆ ಬೀಜ ಪೂರೈಕೆ ಆಗಬಾರದು. ಕಳಪೆ ಬೀಜದ ಜೊತೆಗೆ ಕಳಪೆ ನಕಲಿ ರಸ ಗೊಬ್ಬರ, ಔಷಧಿಯನ್ನು ಸೀಝ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಬೀಜ ಕಾಯಿದೆ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಕೊರೋನ ಪಾಸಿಟಿವ್ ಬಂದವರು ಸ್ವತಃ ತಮ್ಮೊಂದಿಗೆ ಯಾರೆಲ್ಲ ಸಂಪರ್ಕಕ್ಕೆ ಬಂದಿದ್ದರು. ಎಲ್ಲೆಲ್ಲಿ ಓಡಾಡಿದ್ದರೆಂಬ ಮಾಹಿತಿಯನ್ನು ಅವರೆ ಸ್ವತಃ ನೀಡಿದರೆ ಚಿಕಿತ್ಸೆಗೆ ಮತ್ತು ಇನ್ನಿತರರಿಗೆ ಸೋಂಕಿನಿಂದ ತಪ್ಪಿಸಲು ಸಹಾಯಕವಾಗುತ್ತದೆ. ಈಗ ಪರೀಕ್ಷಾ ಕೇಂದ್ರಗಳು ಹೆಚ್ಚಾಗಿರುವ ಕಾರಣ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಮಾಡಲು ಅನುಕೂಲವಾಗುತ್ತಿದೆ. ಹೊರಗಿನಿಂದ ಬಂದವರಿಂದ ಹೆಚ್ಚಾಗಿ ಸೋಂಕು ಹರಡುತ್ತಿದೆ. ಎಲ್ಲರೂ ತಪ್ಪದೇ ಸುರಕ್ಷಿತ ಅಂತರ, ಸರಕಾರದ ನಿಯಮ ಪಾಲನೆ ಅನುಸರಿಸಬೇಕೆಂದು ಬಿ.ಸಿ.ಪಾಟೀಲ್ ಹೇಳಿದರು.

ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಜೊತೆಗೆ ಮಾಜಿ ಸಚಿವ ಎಚ್.ವಿಶ್ವನಾಥ್‍ಗೂ ವಿಧಾನಪರಿಷತ್ ಸ್ಥಾನ ಸಿಗುತ್ತದೆ ಎಂಬ ಭರವಸೆಯಿತ್ತು. ಆದರೆ, ಈಗ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿದೆ. ಇನ್ನೂ ನಾಲ್ಕೈದು ಸ್ಥಾನಗಳು ಖಾಲಿಯಾಗಲಿದ್ದು, ಸದ್ಯದಲ್ಲಿಯೇ ಅವರಿಗೂ ಅವಕಾಶ ಸಿಗಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News