221 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಒಳಚರಂಡಿ ವ್ಯವಸ್ಥೆ: ಸಚಿವ ಭೈರತಿ ಬಸವರಾಜ

Update: 2020-06-29 17:58 GMT

ಬಳ್ಳಾರಿ, ಜೂ.29: ಬಳ್ಳಾರಿಯಲ್ಲಿ ಒಳಚರಂಡಿ ವ್ಯವಸ್ಥೆ ಹಳೆಯದಾಗಿದ್ದು, 221 ಕೋಟಿ ರೂ.ವೆಚ್ಚದಲ್ಲಿ ಬಳ್ಳಾರಿಯ ಒಳಚರಂಡಿ ವ್ಯವಸ್ಥೆ ರೂಪಿಸುವ ಯೋಜನೆ ನಮ್ಮ ಮುಂದಿದ್ದು, ಜಿಲ್ಲಾ ಖನಿಜ ನಿಧಿ ಅಡಿ ಬಳಸಿಕೊಂಡು ಯೋಜನೆ ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಅನುಮೋದನೆ ಕೊಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗೋನಾಳ ಗ್ರಾಮದ ರೈತರ ಸಹಯೋಗದೊಂದಿಗೆ 102 ಎಕರೆ ಪ್ರಸ್ತಾಪಿತ ವಸತಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದಕ್ಕೆ ಸೋಮವಾರ ಯೋಜನೆಯ ಸ್ಥಳದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಳೆದ ತಿಂಗಳು ಪ್ರಗತಿ ಪರಿಶೀಲನೆ ನಡೆಸಲು ಆಗಮಿಸಿದ್ದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ನಗರದ 12 ವಲಯಗಳಿಗೆ ನಿರಂತರ ಕುಡಿಯುವ ನೀರು ಸರಬರಾಜಿಗೆ ಚಾಲನೆ ನೀಡಲಾಗುತ್ತದೆ. ಈ ಪ್ರಸ್ತಾವಿತ ವಸತಿ ಯೋಜನೆ ಬೇಗ ಪೂರ್ಣಗೊಳ್ಳಲಿ ಮತ್ತು ಇನ್ನೂ ಮೂನ್ನೂರು ಎಕರೆಯಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಿ. ನಿವೇಶನವಿಲ್ಲ ಎಂಬ ಕೊರಗನ್ನು ನಿವಾರಿಸುವ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು.

ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾತನಾಡಿ, ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ನಿರಂತರ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಬಹುದೊಡ್ಡ ಸಮಸ್ಯೆಯಾಗಿದ್ದು, ಇದು ಆಗುವುದಿಲ್ಲ ಅಂತ ಕಳೆದ ತಿಂಗಳು ಜಿಲ್ಲೆಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಹೇಳಿದ್ದೆ. ಆದರೇ ಅವರು ಮಾಡೇ ಮಾಡ್ತೀವಿ ನೋಡಿ ಅಂತೇಳಿ ಮಾಡಿ ತೋರಿಸಿದ್ದಾರೆ. ಈ ರೀತಿ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುವಂತ ಸಚಿವರು ನಮಗೆ ಬೇಕು. ಇಚ್ಛಾಶಕ್ತಿ ಇದ್ದರೇ ಮಾತ್ರ ಕೆಲಸಗಳಾಗಲು ಸಾಧ್ಯ ಎನ್ನುವುದಕ್ಕೆ ಇವರು ಉದಾಹರಣೆ ಎಂದರು.

ಈ ಬಡಾವಣೆಗೆ ಸಚಿವ ಸಂಪುಟ ಸಭೆಯಲ್ಲಿ 50:50 ಅನುಪಾತದಡಿ ಅನುಮೋದನೆ ದೊರಕಿಸಿಕೊಡುವಲ್ಲಿ ನಗರಾಭಿವೃದ್ಧಿ ಸಚಿವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ರೈತರಿಗೆ ಲಾಭವಾಗುವ ದೃಷ್ಟಿಯಿಂದ ಈ ಅನುಪಾತದಡಿ ಅನುಮೋದನೆ ದೊರಕುವಂತೆ ನೋಡಿಕೊಳ್ಳಲಾಗಿದೆ. ಇದು ಒಂದು ಒಳ್ಳೆಯ ಬಡಾವಣೆ ಆಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್, ಬುಡಾ ಆಯುಕ್ತ ಈರಪ್ಪ, ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News