ಕೊಡಗಿನಲ್ಲಿ ರೆಸಾರ್ಟ್, ಹೋಂ ಸ್ಟೇ ಮುಚ್ಚಲು ಜಿಲ್ಲಾಧಿಕಾರಿ ಆದೇಶ
Update: 2020-07-07 13:01 GMT
ಮಡಿಕೇರಿ, ಜು.7: ಕೊಡಗು ಜಿಲ್ಲೆಯಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಯ ಎಲ್ಲಾ ರೆಸಾರ್ಟ್, ವಸತಿ ಗೃಹ, ಮತ್ತು ಹೋಂಸ್ಟೇ ಗಳನ್ನು ಮಂಗಳವಾರ (ಜು.7)ದಿಂದ ಮುಚ್ಚುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ.
ಈಗಾಗಲೇ ಪ್ರವಾಸಿಗರು ತಂಗಿದ್ದರೆ ಅವಧಿ ಮುಗಿದ ಕೂಡಲೇ ಅವರನ್ನು ಜಿಲ್ಲೆಯಿಂದ ಕಳುಹಿಸಬೇಕು. ಯಾವುದೇ ಪ್ರವಾಸಿಗರ ಮುಂಗಡ ಬುಕ್ಕಿಂಗ್ ಪಡೆದಿದ್ದರೆ ಅದನ್ನು ಹಣ ಮರುಪಾವತಿಸಿ ರದ್ದುಗೊಳಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.
ಈ ಹಿಂದೆ ಜಿಲ್ಲೆಯ ಹೋಂಸ್ಟೇ ಹಾಗೂ ಹೊಟೇಲ್ ಅಸೋಸಿಯೇಷನ್ ಸ್ವಯಂಪ್ರೇರಣೆಯಿಂದ ಕೆಲವು ದಿನಗಳ ಕಾಲ ತಮ್ಮ ಹೋಂಸ್ಟೇ ಹಾಗೂ ಲಾಡ್ಜ್ ಗಳನ್ನು ಮುಚ್ಚುವ ಮೂಲಕ ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಥ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.