ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ಫಲಪ್ರದ, 7 ಸಾವಿರ ಬೆಡ್ ಮೀಸಲಿರಿಸಲು ಒಪ್ಪಿಗೆ: ಸಚಿವ ಡಾ.ಸುಧಾಕರ್

Update: 2020-07-08 16:49 GMT

ಬೆಂಗಳೂರು, ಜು. 8: ಕೋವಿಡ್ ಪರಿಸ್ಥಿತಿ ಕುರಿತು ರಾಜ್ಯ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಕುರಿತು ಪರಿಶೀಲಿಸಲು ಕೇಂದ್ರದಿಂದ ಆಗಮಿಸಿದ್ದ ತಂಡ ಸತತ ಎರಡು ದಿನಗಳ ಅಧ್ಯಯನದ ನಂತರ ತೃಪ್ತಿಯನ್ನು ವ್ಯಕ್ತಪಡಿಸಿ ಕೆಲವು ಸಲಹೆಗಳನ್ನು ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗಿನ ಸಭೆಯ ನಂತರ ಆನ್‍ಲೈನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದಿನ ಸಭೆ ಫಲಪ್ರದವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸರಕಾರದೊಂದಿಗೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಲು ಸಹಮತ ಸೂಚಿಸಿವೆ. ಒಟ್ಟಾರೆ ಸಭೆಯಲ್ಲಿ ಪ್ರಮುಖವಾಗಿ 6 ರಿಂದ 7 ಸಾವಿರ ಬೆಡ್‍ಗಳನ್ನು ಮೀಸಲಿರಿಸಲು ಒಪ್ಪಿಕೊಂಡಿದ್ದಾರೆ. ಎಲ್ಲ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಧನ್ಯವಾದಗಳು ಎಂದು ತಿಳಿಸಿದರು.

ಪ್ರತಿ ಆಸ್ಪತ್ರೆಯ ಬೆಡ್‍ಗಳು ಸೆಂಟ್ರಲೈಜಡ್ ವ್ಯವಸ್ಥೆ ಜಾರಿಯಾಗಲಿದ್ದು, ಯಾವ ಆಸ್ಪತ್ರೆಯಲ್ಲಿರುವ ಬೆಡ್‍ಗಳು ಖಾಲಿ ಇವೆ ಮಾಹಿತಿ ಮಾಹಿತಿ ಸಿಗಲಿದೆ. ಶಂಕಿತ ಸೊಂಕಿತರು ಖಾಸಗಿಯಾಗಿ ಆಸ್ಪತ್ರೆಯಲ್ಲಿ ನೇರವಾಗಿ ಚಿಕಿತ್ಸೆ ಪಡೆಯಬಹುದು. ಶಿವಾಜಿನಗರದಲ್ಲಿರುವ ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆವತಿಯಿಂದ ನಿರ್ಮಿಸಿರುವ 200 ಹಾಸಿಗೆಗಳ ಸುಸಜ್ಜಿತ ಕಟ್ಟಡವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಇನ್ಫೋಸಿಸ್ ಸಂಸ್ಥೆಗೆ ನೀಡಲಾಗಿದೆ. ಇಂದು ಈ ಆಸ್ಪತ್ರೆಯ ಕಾಮಾಗಾರಿಗಳನ್ನು ವೀಕ್ಷಿಸಲಾಯಿತು ಎಂದರು.

ಮಹೇಂದ್ರ ಕಂಪನಿ ಜೊತೆ ಹೆಚ್ಚಿನ ಆಂಬುಲೆನ್ಸ್ ಗಳಿಗಾಗಿ ಒಡಂಬಡಿಕೆ ಮಾಡಿಕೊಂಡಿದ್ದು, ಕೋವಿಡ್ ವಿರುದ್ಧ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ತಂಡವಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಜೆ.ಜೆ.ಎಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಭೆಗಳನ್ನು ಮಾಡಲಾಗಿದ್ದು, ಸಿಎಂ ಗಮನಕ್ಕೆ ತರಲಾಗಿದೆ, ಕಾಲೇಜಿನ ಆಡಳಿತ ಮಂಡಳಿ ಸ್ಟೈಫಂಡಿಗೆ ಜವಬ್ದಾರಿಯಾಗಿದ್ದು, ಕೂಡಲೇ ಸ್ಟೈಫಂಡ್ ಬಿಡುಗಡೆ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.

ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ.ಮಂಜುನಾಥ್ ಮಾತನಾಡಿ, ಕೋವಿಡ್ ವಿಶ್ವದ ವಿಪತ್ತಾಗಿದ್ದು, ನಾವು ಇದನ್ನು ಮಾನಸಿಕವಾಗಿ ಎದುರಿಸಬೇಕಾಗುತ್ತದೆ, ಇದಕ್ಕಿರುವ ಮೂರು ಮುಖ್ಯ ಪರಿಹಾರಗಳೆಂದರೆ ಅಂತರವನ್ನು ಕಾಪಾಡಿಕೊಳ್ಳುವುದು, ಮಾಸ್ಕನ್ನು ಸರಿಯಾಗಿ ಧರಿಸುವುದು ಹಾಗೂ ದೇಹದ ಟೆಂಪರೇಚರನ್ನು ಆಗಾಗ್ಗೆ ತಪಾಸಣೆ ಮಾಡಿಕೊಳ್ಳುವುದು. ಈ ಮೂರು ಅಂಶಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ಇಂದು ನಮ್ಮ ರಾಜ್ಯದಲ್ಲಿ 82 ಕೋವಿಡ್ ಟೆಸ್ಟ್ ಲ್ಯಾಬ್‍ಗಳಿದ್ದು, ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಮಾತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಸಕ್ತ ಒಂದು ದಿನಕ್ಕೆ ರಾಜ್ಯದಲ್ಲಿ 18 ಸಾವಿರ ಟೆಸ್ಟ್ ಗಳನ್ನು ಮಾಡಲಾಗುತ್ತಿದೆ ಮತ್ತು ಕೆಲವೇ ದಿನಗಳಲ್ಲಿ ದಿನಕ್ಕೆ 30 ಸಾವಿರ ಜನರಿಗೆ ಟೆಸ್ಟ್ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಆಂಟಿಜೆನ್ ಟೆಸ್ಟ್ ಆರಂಭಿಸಲು ಯೋಜಿಸಲಾಗಿದ್ದು, ಇದರಿಂದ ಕೆಲವೇ ನಿಮಿಷಗಳಲ್ಲಿ ಕೋವಿಡ್ ಪ್ರಾಥಮಿಕ ತಪಾಸಣೆ ಮಾಡಬಹುದಾಗಿದ್ದು, ಇದರಲ್ಲಿ ಪಾಸಿಟಿವ್ ಕಂಡು ಬಂದಲ್ಲಿ ಅಂತಹವರನ್ನು ಹೆಚ್ಚಿನ ತಪಾಸಣೆಗಾಗಿ ಕಳುಹಿಸಬಹುದು. ಪ್ರತಿ ಆಸ್ಪತ್ರೆಗಳು ಈ ಆಂಟಿಜನ್ ಉತ್ಪನ್ನವನ್ನು ಬಳಸಲು ಮನವಿ ಮಾಡಿದರು. ಕೋವಿಡ್ ಭಯದಿಂದ ಜನರು ಮುಕ್ತರಾಗಬೇಕು, ಇದೊಂದು ಸಂಪರ್ಕದಿಂದ ಬರುವ ವೈರಾಣುವಾಗಿದ್ದು ಭಯದಿಂದ ಜನರು ತಲ್ಲಣಗೊಂಡಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗುವುದಕ್ಕಿಂತ ಹೆಚ್ಚಿನ ಔಷಧಿ ಇಲ್ಲ, ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಶೇ.80-90 ಕೋವಿಡ್ ರೋಗಿಗಳಿಗೆ ಯಾವುದೇ ಗಂಭೀರ ತೊಂದರೆಯಾಗುವುದಿಲ್ಲ, ಕೆಲವು ಜನರು ತಮ್ಮ ಅನಾರೋಗ್ಯದ ಇತರೆ ಕಾರಣಗಳಿಗಾಗಿ ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ರಾಜ್ಯ ಸರಕಾರದಿಂದ ಸ್ಥಾಪಿಸಲಾಗುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಕೋವಿಡ್ ಕೇಂದ್ರದಲ್ಲಿ ವೈದ್ಯರ ಜೊತೆಗೆ ರೋಬಟ್ ಬಳಸಿಕೊಳ್ಳಬೇಕು. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರು, ವಯಸ್ಸಾದವರು ಆದಷ್ಟು ಹೊರಗಡೆ ಬರುವುದನ್ನು ಕಡಿಮೆ ಮಾಡಬೇಕು, ಬೆಂಗಳೂರಲ್ಲಿ ಇತ್ತೀಚಿಗೆ ಕೋವಿಡ್ ಸೊಂಕಿತರು ಜಾಸ್ತಿಯಾಗಲು ಮುಖ್ಯವಾಗಿ ಊರಿಂದ ಊರಿಗೆ ತಿರುಗಾಡುವವರು ಕಾರಣ'

-ಡಾ.ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News