ಹನೂರು: ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲು ಒತ್ತಾಯಿಸಿ ಧರಣಿ
Update: 2020-07-10 11:06 GMT
ಹನೂರು, ಜು.10: ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಸ್ಥಳೀಯರು ಪ್ರತಿಭಟಿಸಿದ್ದಾರೆ.
ಮಹದೇಶ್ವರ ಬೆಟ್ಟದ ನಿವಾಸಿಗಳು, ರೈತ ಸಂಘ, ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಕರ್ತರು ಜಂಟಿಯಾಗಿ ಮಹದೇಶ್ವರ ಬೆಟ್ಟ ಪ್ರವೇಶ ದ್ವಾರದ ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಸಿ ದೇಗುಲ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ.
ಹೊರ ಜಿಲ್ಲೆಗಳಿಂದ ಬರುವ ಭಕ್ತರಿಗೆ ಬೆಟ್ಟದ ತಪ್ಪಲಿನ ತಾಳಬೆಟ್ಟದಲ್ಲಿಯೇ ಪ್ರವೇಶ ನಿಷೇಧಿಸಬೇಕು. ಜೊತೆಗೆ, ಹೊರ ಗ್ರಾಮದವರು ಬೆಟ್ಟಕ್ಕೆ ಬರದಂತೆ ತಡೆಯಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಬಳಿಕ ಬೆಟ್ಟಕ್ಕೆ ಭಕ್ತರ ಪ್ರವೇಶ ಕಲ್ಪಿಸಲಾಗಿತ್ತು. ಇತ್ತೀಚೆಗೆ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡಿತ್ತು. ಈ ನಿಟ್ಟಿನಲ್ಲಿ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಸ್ಥಳಿಯರು ಮನವಿ ಪತ್ರ ಸಲ್ಲಿಸಿದ್ದರು.