ಕೊರೋನ ಸೋಂಕಿತರ ಅಂತ್ಯಕ್ರಿಯೆಗೆ ವಕ್ಫ್ ಬೋರ್ಡ್ ನಿಯಮಾವಳಿಗಳ ಪ್ರಕಟಣೆ
ಬೆಂಗಳೂರು, ಜು.10: ಕೊರೋನ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ಸಂದರ್ಭದಲ್ಲಿ ಸರಕಾರದ ನಿಯಮಾವಳಿಗಳನ್ನು ಪಾಲಿಸಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ದಕ್ಷಿಣ ವಿಭಾಗದ ವಕ್ಫ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಅಲ್ಲದೆ, ತಾಲೂಕು ಮಟ್ಟದಲ್ಲಿರುವ ಜಾಮಿಯಾ ಮಸೀದಿಗಳನ್ನು ನೋಡಲ್ ಮಸೀದಿಗಳನ್ನಾಗಿ ನೇಮಿಸುವಂತೆ ರಾಜ್ಯ ವಕ್ಫ್ ಸೂಚಿಸಿದೆ.
ನೋಡಲ್ ಅಧಿಕಾರಿ ಹಾಗೂ ನೋಡಲ್ ಮಸೀದಿಯು ತಮ್ಮ ವ್ಯಾಪ್ತಿಯಲ್ಲಿ ಸ್ಮಶಾನವನ್ನು ಗುರುತಿಸಿಬೇಕು. ಖಬರಸ್ತಾನದ ಆಡಳಿಯ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿಯ ದೂರವಾಣಿ ಸಂಖ್ಯೆಯನ್ನು ಕ್ರೋಡೀಕರಿಸಬೇಕು. ಅಲ್ಲದೆ, ಮೃತರ ಅಂತ್ಯಕ್ರಿಯೆ ನಡೆಸುವವರ ಸಂಖ್ಯೆಯನ್ನು ಸಂಗ್ರಹಿಸಬೇಕು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಹಿಳೆಯರು ಹಾಗೂ ಪುರುಷರ ಅಂತ್ಯಕ್ರಿಯೆ ನಡೆಸಲು ತಂಡವನ್ನು ರಚಿಸಬೇಕು. ಪುರುಷರಿಗಾಗಿ 12 ಹಾಗೂ ಮಹಿಳೆಯರಿಗಾಗಿ 6 ಮಂದಿ ಸ್ವಯಂ ಸೇವಕರನ್ನು ನೇಮಿಸಬೇಕು.
ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ತಲಾ 6 ಮಂದಿ ಮಹಿಳೆಯರು ಹಾಗೂ ಪುರುಷರ ತಂಡವನ್ನು ರಚಿಸಬೇಕು. ಕೋವಿಡ್ ಸೋಂಕಿನಿಂದ ಮೃತಪಡುವವರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಜನಾಝ ನಮಾಝ್ ನೆರವೇರಿಸುವಾಗ 20ಕ್ಕಿಂತ ಹೆಚ್ಚಿನ ಮಂದಿ ಇರುವಂತಿಲ್ಲ ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.