ಸೊರಬ ಎಪಿಎಂಸಿ: 3ನೇ ಅವಧಿಗೆ ಜಯಶೀಲಪ್ಪ ಅಧ್ಯಕ್ಷ, ಪ್ರಕಾಶ್ ಉಪಾಧ್ಯಕ್ಷ

Update: 2020-07-11 06:38 GMT

ಸೊರಬ, ಜು.11: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ಮೂರನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಯಶೀಲಪ್ಪಹಾಗೂ ಉಪಾಧ್ಯಕ್ಷರಾಗಿ ಜೆ. ಪ್ರಕಾಶ್ ಹಳೆ ಸೊರಬ ಆಯ್ಕೆಯಾಗುವ ಮೂಲಕ ಜೆಡಿಎಸ್ ಬೆಂಬಲಿತರು ತಮ್ಮ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ.

ಮೂವರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ 16 ಸಂಖ್ಯಾಬಲವುಳ್ಳ ಇಲ್ಲಿನ ಎಪಿಎಂಸಿಯಲ್ಲಿ 9 ಜೆಡಿಎಸ್ ಬೆಂಬಲಿತ ಹಾಗೂ 7 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 9 ಮತಗಳನ್ನು ಪಡೆದು ವಿಜಯದ ನಗೆ ಬೀರಿದರೆ, ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಶಿವರಾಜ್‌ಗೌಡ 7 ಮತಗಳಿಗೆ ತೃಪ್ತಿಪಟ್ಟುಕೊಂಡರು.

ಲಾಟರಿಯಲ್ಲಿ ಒಲಿದ ಅದೃಷ್ಟ:

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಪ್ರಕಾಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೈ.ಎಂ. ನಾಗರಾಜ್ ಹುರಳೀಕೊಪ್ಪ ಸ್ಪರ್ಧಿಸಿದ್ದರು. ಜೆಡಿಎಸ್ ಬೆಂಬಲಿತ ಸದಸ್ಯರೊಬ್ಬರು ಅಡ್ಡ ಮತದಾನ ಮಾಡಿದ ಪರಿಣಾಮ ತಲಾ 8 ಮತಗಳು ಲಭಿಸಿದವು. ಈ ವೇಳೆ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾದರೂ, ಲಾಟರಿ ಎತ್ತುವ ಮೂಲಕ ಉಪಾಧ್ಯಕ್ಷರ ಆಯ್ಕೆ ನಡೆದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ. ಪ್ರಕಾಶ್ ಹಳೆಸೊರಬ ಗೆಲವು ಸಾಧಿಸಿದರು.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ನಫೀಸಾ ಬೇಗಂ, ಸಹಾಯಕ ಚುನಾವಣಾಧಿಕಾರಿಯಾಗಿ ಶಿರಸ್ತೆದಾರ್ ಎಂ.ಎಸ್. ಶಿವಪ್ರಸಾದ್, ಎಪಿಎಂಸಿ ಕಾರ್ಯದರ್ಶಿ ಆಶಾ ಕಾರ್ಯನಿರ್ವಹಿಸಿದರು. ಜೆಡಿಎಸ್ ಬೆಂಬಲಿತರು ಜಯ ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳು ಸಂಭ್ರಮಿಸಿದರು.

ಜಿಪಂ ಸದಸ್ಯ ಶಿವಲಿಂಗೇಗೌಡ, ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರೇಗೌಡ, ಎಪಿಎಂಸಿ ಅಧ್ಯಕ್ಷ ಕೆ.ಅಜ್ಜಪ್ಪ, ಉಪಾಧ್ಯಕ್ಷ ನೀಲಕಂಠಗೌಡ, ಸದಸ್ಯರಾದ ಎಲ್.ಜಿ.ರಾಜಶೇಖರ್, ಜಯಶೀಲಗೌಡ, ಶಾಂತಮ್ಮ ಉಳವಿ, ಸರಸ್ವತಮ್ಮ ಪ್ರಶಾಂತ್‌ಮೇಸ್ತ್ರಿ, ರಾಜೇಂದ್ರ ನಾಯ್ಕಿ, ಮುಖಂಡರು ರುದ್ರಪ್ಪ ಕಡ್ಲೇರ್, ಪ್ರಶಾಂತ್ ಮೇಸ್ತ್ರಿ, ಕೆ.ವಿ. ಗೌಡ, ಶಿವಕುಮಾರ್ ತತ್ತೂರು, ಪ್ರಭು ಶಿಗ್ಗಾ ಸೇರಿದಂತೆ ಜೆಡಿಎಸ್ ಮುಖಂಡರು, ಮಧು ಬಂಗಾರಪ್ಪಅಭಿಮಾನಿಗಳು ಉಪಸ್ಥಿತರಿದ್ದರು  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News