ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 70 ಮಂದಿ ಕೋವಿಡ್19 ಗೆ ಬಲಿ: 2,798 ಮಂದಿಗೆ ಸೋಂಕು ದೃಢ

Update: 2020-07-11 17:00 GMT

ಬೆಂಗಳೂರು, ಜು.11: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಕೆಲ ದಿನಗಳಿಂದ ದೈನಂದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಮತ್ತೆ 2,798 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 36,216 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 70 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 613ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 23 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಮೈಸೂರು 8, ದಕ್ಷಿಣ ಕನ್ನಡದಲ್ಲಿ 5, ಶಿವಮೊಗ್ಗ 3, ದಾವಣಗೆರೆ 3, ಹಾಸನ 2, ಧಾರವಾಡ 3, ಬಾಗಲಕೋಟೆ 2, ರಾಮನಗರ 2, ವಿಜಯಪುರ 2, ಬೆಳಗಾವಿ 2, ತುಮಕೂರು 2, ಚಿಕ್ಕಬಳ್ಳಾಪುರ 2, ಕಲಬುರಗಿ 2, ಬಳ್ಳಾರಿ, ರಾಮನಗರ, ಬೀದರ್, ರಾಯಚೂರು, ಉತ್ತರ ಕನ್ನಡ, ಕೊಪ್ಪಳ, ವಿಜಯಪುರದಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,533, ದಕ್ಷಿಣ ಕನ್ನಡ 186, ಉಡುಪಿ 90, ಮೈಸೂರು 83, ತುಮಕೂರು 78, ಧಾರವಾಡ 77, ಯಾದಗಿರಿ 74, ದಾವಣಗೆರೆ 72, ಕಲಬುರಗಿ 65, ಬಳ್ಳಾರಿ 65, ಬೀದರ್ 63, ವಿಜಯಪುರ 48, ಉತ್ತರ ಕನ್ನಡ 40, ಗದಗ 40, ಬಾಗಲಕೋಟೆ 37, ಹಾಸನ 34, ರಾಮನಗರ 30, ಶಿವಮೊಗ್ಗ 26, ಕೊಪ್ಪಳ 23, ಮಂಡ್ಯ 23, ಚಿಕ್ಕಬಳ್ಳಾಪುರ 20, ಚಾಮರಾಜನಗರ 17, ಹಾವೇರಿ 16, ರಾಯಚೂರು 14, ಕೋಲಾರ 12, ಕೊಡಗು 12, ಚಿತ್ರಗುರ್ಗ 9, ಬೆಂಗಳೂರು ಗ್ರಾಮಾಂತರ 5, ಬೆಳಗಾವಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 3 ಪ್ರಕರಣ ಪಾಸಿಟಿವ್ ಬಂದಿದೆ.

ಶನಿವಾರ ರಾಜ್ಯದಲ್ಲಿ 20,587 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಆ ಪೈಕಿ 17,488 ಮಾದರಿಗಳು ನೆಗೆಟಿವ್ ಬಂದಿದೆ. ಒಟ್ಟಾರೆ ರಾಜ್ಯದಲ್ಲಿ 36,216 ಕೊರೋನ ಸೋಂಕಿತರ ಪೈಕಿ 14,716 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 880 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 613 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 20,883 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 504 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News