ಹೆಚ್ಚುತ್ತಿರುವ ಕೋವಿಡ್19: ರಾಜ್ಯಾದ್ಯಂತ ಲಾಕ್​ಡೌನ್ ಜಾರಿ ಮಾಡಲು ದೇವೇಗೌಡ ಆಗ್ರಹ

Update: 2020-07-13 05:48 GMT

ಬೆಂಗಳೂರು, ಜು.13: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜು.14ರ ರಿಂದ ಲಾಕ್ ಡೌನ್ ಜಾರಿ ಮಾಡಿರುವ ಸರಕಾರದ ಕ್ರಮ ಸ್ವಾಗತಾರ್ಹ. ಇದರ ಜೊತೆಗೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಶರವೇಗದಲ್ಲಿ ಹರಡುತ್ತಿರುವ ಮಹಾಮಾರಿ ಕೊರೋನ ವೈರಸ್ ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೆ ತಿಂಗಳು 14ರ ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಜಾರಿ ಮಾಡಿದೆ, ಇದು ಸ್ವಾಗತಾರ್ಹ. ಇದರ ಜೊತೆಗೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲು ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರವನ್ನು ನಾನು ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 

ನಮಗೆ ಆರೋಗ್ಯವೇ ಭಾಗ್ಯ. ಆದ್ದರಿಂದ ದಯವಿಟ್ಟು ಮನೆಯಿಂದ ಹೊರ ಹೋಗಬೇಕಾದರೆ ದಯವಿಟ್ಟು ಮಾಸ್ಕ್ ಧರಿಸಿ. ಸುರಕ್ಷಿತ ಅಂತರ ಕಾಯ್ದುಕೊಳ್ಳಿ. ಏನೇ ಮುಟ್ಟಬೇಕಾದರೂ ಸ್ಯಾನಿಟೈಸರ್ ನಿಂದ ಕೈ ಅನ್ನು ಸ್ವಚ್ಛ ಗೊಳಿಸಿ ನಂತರ ಮುಟ್ಟಿ. ಮುಖ್ಯವಾದ ಕೆಲಸ ಕಾರ್ಯಗಳು ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಮಹಾಮಾರಿ ವೈರಸ್ಸನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಪ್ಯಾಕೇಜುಗಳನ್ನು ಘೋಷಿಸಿದೆ. ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ನಾಯಕರು ಆಪಾದಿಸುತ್ತಿದ್ದಾರೆ. ಅದೇನೇ ಇದ್ದರೂ ಮುಂಬರುವ ಅಧಿವೇಶನದಲ್ಲಿ ಚರ್ಚೆಮಾಡಲಿ. ಈಗ ನಮಗೆ ಜನತೆಯ ಆರೋಗ್ಯ ಮುಖ್ಯ. ಮೊದಲು ನಾವೆಲ್ಲ ಅದರ ಕಡೆ ಗಮನ ಹರಿಸೋಣ. ಸರ್ಕಾರವು ಸಹ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವೆಲ್ಲ ಜೊತೆಗಿದ್ದೇವೆ. ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಬೇಡ. ದಯವಿಟ್ಟು ಇನ್ನು ಮುಂದಾದರು ಎಚ್ಚೆತ್ತು ಕೆಲಸ ಮಾಡಿ ಎಂದು ದೇವೇಗೌಡ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News