ಜಮೀನು ವಿವಾದ: ವ್ಯಕ್ತಿಗೆ ಚೂರಿ ಇರಿತ
Update: 2020-07-19 18:33 GMT
ಪಾಂಡವಪುರ, ಜು.19: ಜಮೀನು ವಿವಾದದ ವಿಚಾರವಾಗಿ ನಡೆದ ದಾಯಾದಿಗಳ ಗಲಾಟೆಯಲ್ಲಿ ಓರ್ವ ವ್ಯಕ್ತಿಗೆ ಐವರು ಚೂರಿಯಿಂದ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿರುವ ಘಟನೆ ಪಟ್ಟಣದ ಹಾರೋಹಳ್ಳಿ ಗ್ರಾಮದ ಸಮೀಪ ರವಿವಾರ ಬೆಳಗ್ಗೆ ನಡೆದಿದೆ.
ಪುರಸಭೆ ಮಾಜಿ ಅಧ್ಯಕ್ಷ ಡಿ.ಹುಚ್ಚೇಗೌಡ ಅವರ ಸಹೋದರ ಡಿ.ಚಿಕ್ಕಣ್ಣ(45) ಎಂಬಾತ ಗಾಯಾಳು. ಅದೇ ಗ್ರಾಮದ ಸ್ವಾಮಿಗೌಡ, ಜಗದೀಶ್, ಚನ್ನೇಶ, ಚೆಲುವರಾಜು, ಮದನ್ ಎಂಬುವವರು ಆರೋಪಿಗಳು.
ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ಬಳಿ ಇರುವ 10ಗುಂಟೆ ಜಮೀನು ವಿವಾದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೂ, ಚಿಕ್ಕಣ್ಣ ಉಳುಮೆಗೆ ಮುಂದಾದಾಗ ಈ ಘರ್ಷಣೆ ನಡೆದಿದೆ.
ಚೂರಿ ಇರಿತಕ್ಕೆ ಒಳಗಾಗಿರುವ ಚಿಕ್ಕಣ್ಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿಪಿಐ ಪ್ರಭಾಕರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದಾರೆ.