ಕಾಸರಗೋಡು ಮೂಲಕ ಹಾದುಹೋಗುವ ಸರಕು ವಾಹನಗಳಿಗೆ ತಡೆಯಿಲ್ಲ: ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು

Update: 2020-07-27 08:43 GMT

ಕಾಸರಗೋಡು,ಜು. 27: ಕಾಸರಗೋಡು ಜಿಲ್ಲೆಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ

ಕಂಟೈನ್ಮೆಂಟ್ ಝೋನ್ ಗಳಲ್ಲಿ ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ತೆರೆಯಬಹುದು. ಕಾಸರಗೋಡು ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಎಲ್ಲ ಅಂಗಡಿಗಳೂ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಆದರೆ ಅಂಗಡಿಗಳಲ್ಲಿ ಜನ ಗುಂಪು ಸೇರುವುದು ಸಲ್ಲದು, ಮಾಸ್ಕ್, ಸಾನಿಟೈಸರ್ ಬಳಕೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಕಡ್ಡಾಯವಾಗಿ ಪಾಲಿಸಬೇಕು. ಅಂಗಡಿಗಳ ಸಿಬ್ಬಂದಿ ಮಾಸ್ಕ್ , ಗ್ಲೌಸ್ ಧರಿಸಲೇ ಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಗಡಿ ಮುಚ್ಚುಗಡೆ ಸಹಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದ್ದಾರೆ. 

ಕಂಟೈನ್ಮೆಂಟ್ ಝೋನ್ ಗಳ ಸಹಿತ ಪ್ರದೇಶಗಳ ಅಕ್ಷಯ ಕೇಂದ್ರಗಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆದು ಕಾರ್ಯಾರಿಸಬಹುದು. ಮೆಡಿಕಲ್ ಶಾಪ್ ಗಳಿಗೆ ಸಮಯದ ಅವಧಿ ಕಡ್ಡಾಯವಿಲ್ಲ. ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು, ಮೋಟಾರು ವಾಹನ ಶಾಪ್ ಗಳು ಇತ್ಯಾದಿ ತೆರೆಯಬಾರದು ಎಂದವರು ಹೇಳಿದರು. 

ತರಕಾರಿ, ಹಣ್ಣು, ಮೀನು ಇತ್ಯಾದಿ ಸರಕು ವಾಹನಗಳಿಗೆ ತಡೆಯಿಲ್ಲ: ಜಿಲ್ಲಾಧಿಕಾರಿ 

ಕಾಸರಗೋಡು ಜಿಲ್ಲೆಯ ಮೂಲಕ ಹಾದುಹೋಗುವ ತರಕಾರಿ, ಹಣ್ಣು, ಮೀನು ಇತ್ಯಾದಿ ಸರಕು ವಾಹನಗಳಿಗೆ ತಡೆ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.  

ಕರ್ನಾಟಕದಿಂದ ವಾಹನಗಳ ಮೂಲಕ ತರಲಾಗುವ ಹಣ್ಣು, ತರಕಾರಿ,ಮೀನು ಇತ್ಯಾದಿಗಳನ್ನು ಗಡಿ ಪ್ರದೇಶಗಳಲ್ಲಿ ಜಿಲ್ಲೆಯ ಇತರ ವಾಹನಗಳಿಗೆ ತುಂಬಿಸಬೇಕು. ಮಾಸ್ಕ್, ಗ್ಲೌಸ್ ಧರಿಸುವಿಕೆ, ಸಾನಿಟೈಸರ್ ಬಳಕೆ ಸಹಿತ ಆರೋಗ್ಯ ಇಲಾಖೆಯ ಎಲ್ಲ ಕಟ್ಟುನಿಟ್ಟುಗಳನ್ನು ಪಾಲಿಸಿ ಸರಕು ಹೇರಿಕೆ ಮತ್ತು ಇಳಿಕೆ ನಡೆಸಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಿ, ವಾಹನ ವಶಪಡಿಸಲಾಗುವುದು. ಸರಕು ಹೇರಿಕೊಂಡು ಬರುವ ವಾಹನಗಳಿಗೆ ಗಡಿಯಿಂದ ಮುಂದಕ್ಕೆ ಜಿಲ್ಲೆಗೆ ಪ್ರವೇಶ ಮಂಜೂರಾತಿ ಇಲ್ಲ. ಜಿಲ್ಲೆಯ ಗಡಿಯಲ್ಲಿ ತರಕಾರಿ ಇತ್ಯಾದಿ ಸರಕು ಹೇರಿಕೆ, ಇಳಿಕೆ ನಡೆಸುವ ವಾಹನಗಳ ಚಾಲಕ, ಇತರ ಕಾರ್ಮಿಕರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರಕ್ಕೊಮ್ಮೆ ಹಾಜರಾಗಿ ಕೋವಿಡ್ ಲಕ್ಷಣ ಹೊಂದಿಲ್ಲ ಎಂದು ಖಚಿತಪಡಿಸಿ ಸರ್ಟಿಫಿಕೆಟ್ ಪಡೆದುಕೊಳ್ಳಬೇಕು ಎಂದು ಅವರು ನುಡಿದರು. 

ಪ್ರತ್ಯೇಕ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ
ಕರ್ನಾಟಕ ಮೆಡಿಕಲ್, ಇಂಜಿನಿಯರಿಂಗ್ ಪ್ರವೇಶಾತಿ (ಕಿಂಸ್) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರತ್ಯೇಕ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಜು.30,31ರಂದು ಈ ಪರೀಕ್ಷೆಗಳು ನಡೆಯಲಿದ್ದು, ಕಾಞಂಗಾಡಿನಿಂದಲೂ, ಕಾಸರಗೋಡಿನಿಂದಲೂ ತಲಪಾಡಿ ಗಡಿಪ್ರದೇಶ ವರೆಗೆ ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ಗಳ ಸಂಚಾರ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. 

ದಕ್ಷಿಣ ಕನ್ನಡ ಜಿಲ್ಲಾಡಳಿತದೊಂದಿಗೆ ನಡೆಸಿದ ಮಾತುಕತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆ.1ರಂದು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರಕಾರ ವಾಹನ ಸೌಲಭ್ಯ ಒದಗಿಸಿದರೆ ಅಂದೂ ಕಾಸರಗೋಡು ಜಿಲ್ಲಾಡಳಿತ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಲಿದೆ ಎಂದವರು ನುಡಿದರು.

ಪರೀಕ್ಷೆಗೆ ಹಾಜರಾಗಿ ಮರಳುವ ವೇಳೆ ವಿದ್ಯಾರ್ಥಿಗಳು ಕಡ್ಡಾಯವಾಗಿ 14 ದಿನ ರೂಂ ಕ್ವಾರಂಟೈನ್ ನಡೆಸಬೇಕು. ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಜತೆಯಾಗಿ ತೆರಳಲು ಅನುಮತಿ ಪಡೆದಿರುವ ಪೋಷಕರೂ 14 ದಿನಗಳ ರೂಂ ಕ್ವಾರಂಟೈನ್ ಪಾಲಿಸಬೇಕು. ಖಾಸಗಿ ವಾನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳುವುದಿದ್ದಲ್ಲಿ ಅಭ್ಯಂತರವಿರುವುದಿಲ್ಲ. ಆದರೆ ಪರೀಕ್ಷೆಗೆ ಹಾಜರಾಗಿ ಮರಳಿ ಬರುವ ವೇಳೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿರಬೇಕು. ಇವರಿಗೂ 14 ದಿನಗಳ ರೂಂ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಅಗತ್ಯ ಸಾಮಗ್ರಿಗಳ ಅಂಗಡಿಗಳು ಇಂತಿವೆ 
ತರಕಾರಿ, ಹಾಲು, ಹಣ್ಣು, ಅಕ್ಕಿ ಸಹಿತ ಧಾನ್ಯಗಳು, ಮೀನು-ಮಾಂಸ ಮಾರಾಟ ಅಂಗಡಿಗಳು, ಅಕ್ಕಿ-ಗೋಧಿ ಮಿಲ್ಲುಗಳು, ಮೆಡಿಕಲ್ ಶಾಪ್ ಗಳು ಇತ್ಯಾದಿಗಳನ್ನು ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಎಂಬುದಾಗಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News