ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ಕೇಂದ್ರದೊಂದಿಗೆ ರಾಜ್ಯದಲ್ಲೂ ಜಾರಿ- ಡಿಸಿಎಂ ಅಶ್ವತ್ಥ ನಾರಾಯಣ

Update: 2020-07-29 17:54 GMT

ಬೆಂಗಳೂರು, ಜು.29: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತವನ್ನು ನಿರ್ಮಾಣ ಮಾಡುವ ಪ್ರಬಲ ಶಕ್ತಿ ಹೊಂದಿದ್ದು, ಆಧುನಿಕ ದೃಷ್ಟಿಕೋನ, ದೇಶದ ಅಗತ್ಯಗಳು, ಜಾಗತಿಕ ಸವಾಲು. ಹೀಗೆ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ರೂಪಿಸಲಾಗಿರುವ ಪರಿಪೂರ್ಣ ಶಿಕ್ಷಣ ನೀತಿ ಇದಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಕೇಂದ್ರ ಸರಕಾರ ಬುಧವಾರ ಪ್ರಕಟಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವಾಗತಿಸಿರುವ ಅವರು, ಹಲವು ವರ್ಷಗಳಿಂದ ನಮ್ಮ ಶಿಕ್ಷಣ ನೀತಿಯೇ ಬದಲಾಗಿಲ್ಲ ಅಂದರೆ ಅಚ್ಚರಿ ಆಗುತ್ತದೆ. ನಮಗೆಲ್ಲರಿಗೂ ಗೊತ್ತಿರುವಂತೆ ಶಿಕ್ಷಣ ಎನ್ನವುದು ಮನುಕುಲವನ್ನು ಮುನ್ನಡೆಸುವ ಚಾಲಕ ಶಕ್ತಿ. ಸಶಕ್ತ ಸಮಾಜದ ಆತ್ಮ. ಯಾವುದೇ ದೇಶವನ್ನು ಬಲಿಷ್ಠವಾಗಿ, ಭವ್ಯವಾಗಿ ನಿರ್ಮಾಣ ಮಾಡಬಲ್ಲ ಶಕ್ತಿ ಅದಕ್ಕೆ ಮಾತ್ರ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರದೊಂದಿಗೆ ರಾಜ್ಯದಲ್ಲೂ ಜಾರಿ: ಈಗಾಗಲೇ ರಾಜ್ಯ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು, ಆ ಬಗ್ಗೆ ಸೂಕ್ತ ಸಲಹೆ-ಸಹಕಾರ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ. ಕೇಂದ್ರ ಸರಕಾರವು ಜಾರಿ ಮಾಡಿದ ಕೂಡಲೇ ರಾಜ್ಯದಲ್ಲಿಯೂ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

1986ರಲ್ಲಿ ಮೊದಲಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು. ಬಳಿಕ 1992ರಲ್ಲಿ ಆ ನೀತಿಯನ್ನು ಪರಿಷ್ಕರಿಸಲಾಯಿತು. ಭಾರತವು ಎಲ್ಲ ರಂಗಗಳಲ್ಲೂ ಶರವೇಗದಲ್ಲಿ ಮುನ್ನಡೆಯುತ್ತಿದೆ. ತಾಂತ್ರಿಕವಾಗಿ, ವೈಜ್ಞಾನಿಕವಾಗಿ ನಾಗಾಲೋಟದಲ್ಲಿ ಸಾಗುತ್ತಿದೆ. ಇಂಥ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ಪದ್ಧತಿ ಇರಲೇಬೇಕು. ನರೇಂದ್ರ ಮೋದಿ ಸರಕಾರ ಈ ಅಗತ್ಯವನ್ನು ಅರ್ಥ ಮಾಡಿಕೊಂಡಿದೆ. ಅಲ್ಲದೆ, ’ಮಾನವ ಸಂಪನ್ಮೂಲ ಸಚಿವಾಲಯ’ವನ್ನು ’ಶಿಕ್ಷಣ ಸಚಿವಾಲಯ’ ಎಂದು ಮರು ನಾಮಕರಣ ಮಾಡಿರುವುದು ಅರ್ಥಪೂರ್ಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ಪದ್ಧತಿಯಲ್ಲಿ ಏಕರೂಪತೆ ತರುವುದು, ಸರ್ವರಿಗೂ ಶಿಕ್ಷಣ ಎನ್ನುವ ಮಾತಿನಂತೆ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡುವುದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಿಂದಲೇ ಅತ್ಯುತ್ತಮ ಶಿಕ್ಷಣ ಸಿಗಲಿ ಎಂಬುದು ನೀತಿಯ ಆಶಯವಾಗಿದೆ. ಜತೆಗೆ, ಬಹುಭಾಷೆಗಳನ್ನು ಗೌರವಿಸುವ ಅಂಶಗಳಿರುವುದು ನಾವೆಲ್ಲರೂ ಗಮನಿಸಬೇಕಾದ ಅಂಶ. ಪ್ರತಿಯೊಬ್ಬರೂ ಹೊಸ ಶಿಕ್ಷಣ ನೀತಿಯನ್ನು ಸ್ವಾಗತಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News