ಬಕ್ರೀದ್: ಮಾರ್ಗಸೂಚಿ ಪಾಲಿಸಲು ಚಿಕ್ಕಮಗಳೂರು ಜಾಮಿಯಾ ಖನ್ಝುಲ್ ಈಮಾನ್ ಮನವಿ

Update: 2020-07-30 04:56 GMT

ಚಿಕ್ಕಮಗಳೂರು, ಜು.29: ಕರಾವಳಿ ಜಿಲ್ಲೆಗಳಲ್ಲಿ ಜು.31 ರಂದು ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಗಸ್ಟ್ 1 ರಂದು ಬಕ್ರೀದ್ ಆಚರಿಸಲಾಗುತ್ತಿದ್ದು, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರವು ನಿರ್ಬಂಧ ಹೇರಿದೆ. ಈ ನಿಟ್ಟಿನಲ್ಲಿ ಮುಸ್ಲಿಮರು ಸರ್ಕಾರದ ಮಾರ್ಗಸೂಚಿ ಪಾಲಿಸಿ ಸಹಕರಿಸಬೇಕು ಎಂದು ಚಿಕ್ಕಮಗಳೂರು ಜಾಮಿಯಾ ಖನ್ಝುಲ್ ಈಮಾನ್ ಅಧ್ಯಕ್ಷ ಹಾಗೂ ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಅಧ್ಯಕ್ಷ ಹಾಜಿ ಮುಹಮ್ಮದ್ ಶಾಹಿದ್ ರಜ್ವಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು, ಮಸೀದಿಗಳಲ್ಲಿ ಒಂದು ಬಾರಿಗೆ 50 ಜನರು ಮಾತ್ರ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಧಿಕ ಜನರು ಬಂದಲ್ಲಿ ಎರಡು ಅಥವ ಮೂರು ಬ್ಯಾಚ್ ಗಳಲ್ಲಿ ಪ್ರಾರ್ಥನೆ ಮಾಡುವಂತೆ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಹಜ್ ಹಾಗು ವಕ್ಫ್ ಇಲಾಖೆ ಸೂಚಿಸಿದೆ ಎಂದು ತಿಳಿಸಿದರು.

ಮಸೀದಿಗಳನ್ನು ಹೊರತು ಪಡಿಸಿ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ಜಾಗಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧಿಸಲಾಗಿದೆ. ಸರ್ವರೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಾಮೂಹಿಕ ಪ್ರಾರ್ಥನೆಗೆ ಮಾರ್ಗಸೂಚಿ
ಬಕ್ರೀದ್ ಸಂಬಂಧಿಸಿದಂತೆ ಜು.29 ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಶಾಂತಿಸಭೆಯನ್ನು ಕರೆಯಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಮುಸ್ಲಿಂ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕೋರೋನ ಜಾಗೃತಿಗೆ ಬೇಕಾದಂತಹ ಎಲ್ಲ ಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳುವುದರ ಜೊತೆಗೆ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಧಿಕಾರಿಗಳಿಗೆ ಮುಸ್ಲಿಂ ಮುಖಂಡರು ಭರವಸೆ ನೀಡಿದರು.

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮೊದಲು ಆಡಳಿತ ಮಂಡಳಿಗಳು ಈ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ. ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. 60 ವರ್ಷ ವಯಸ್ಸು ಮೆಲ್ಪಟ್ಟ ವ್ಯಕ್ತಿಗಳು ಹಾಗು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ಬರಬಾರದು. ಇವರು ಮನೆಯಲ್ಲೇ ನಮಾಝ್ ನಿರ್ವಹಿಸುವುದು.

ನಮಾಜ್ ನಿರ್ವಹಿಸುವರ ಮಧ್ಯೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವುದು, ಮಸೀದಿಗೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬರೂ ತಮ್ಮ ತಮ್ಮ ದೇಹದ ತಾಪಮಾನವನ್ನು ತಪಾಸಣೆಗೆ ಒಳಪಡಿಸಬೇಕು, ಕೈಗಳನ್ನು ಸೋಪಿನಿಂದ ಶುಚಿಗೊಳಿಸಿಕೊಳ್ಳಬೇಕು, ಮಸೀದಿ ಒಳಗಿರುವ ಧಾರ್ಮಿಕ ಗ್ರಂಥಗಳನ್ನು ಮತ್ತು ಇತರೇ ವಸ್ತುಗಳನ್ನು ಸ್ಪರ್ಷಿಸದಿರುವುದು, ಹಸ್ತಲಾಘವ ಅಥವಾ ಆಲಿಂಗನ ಮಾಡಿಕೊಳ್ಳದಂತೆ ನಿಗಾ ವಹಿಸುವುದು, ಅಪರಿಚತರು ಮಸೀದಿಗೆ ಬಂದಲ್ಲಿ ಅವರ ಬಗ್ಗೆ ವಿಶೇಷವಾಗಿ ಗಮನ ಹರಿಸುವುದು ಎಂಬಿತ್ಯಾದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News