ಸುಳ್ಳು ಪ್ರಕರಣ: 6 ಮಾನವಹಕ್ಕು ಹೋರಾಟಗಾರರಿಗೆ 6 ಲ.ರೂ. ನೀಡಲು ಛತ್ತೀಸ್‌ಗಡಕ್ಕೆ ಎನ್ ಎಚ್ ಆರ್ ಸಿ ಆದೇಶ

Update: 2020-08-06 15:08 GMT

ಹೊಸದಿಲ್ಲಿ,ಆ.6: ಆರು ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಅವರಿಗೆ ತಲಾ ಒಂದು ಲಕ್ಷ ರೂ.ಗಳ ಪರಿಹಾರ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ನೆಚ್ಚಾರ್ಸಿ)ವು ಛತ್ತೀಸ್‌ಗಡ ಸರಕಾರಕ್ಕೆ ಆದೇಶಿಸಿದೆ.

 2016,ನ.5ರಂದು ಛತ್ತೀಸ್‌ಗಡ ಪೊಲೀಸರು ಸುಕ್ಮಾ ಜಿಲ್ಲೆಯ ನಾಮಾ ಗ್ರಾಮದಲ್ಲಿ ಶ್ಯಾಮನಾಥ ಬಾಘೇಲ್ ಎಂಬಾತನನ್ನು ಹತ್ಯೆ ಮಾಡಿದ ಆರೋಪದಲ್ಲಿ ತಮ್ಮನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಬಾಘೇಲ್ ಪತ್ನಿಯ ಲಿಖಿತ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎನ್ನಲಾಗಿತ್ತು. ಆದರೆ ತಾನು ದೂರಿನಲ್ಲಿ ಯಾರನ್ನೂ ಹೆಸರಿಸಲಿಲ್ಲ ಎಂದು ಬಾಘೇಲ್ ಪತ್ನಿ ಸ್ಪಷ್ಟಪಡಿಸಿದ್ದರು ಎಂದು ಮಾನವ ಹಕ್ಕುಗಳ ಸಮರ್ಥಕರಾದ ಪ್ರೊ.ನಂದಿನಿ ಸುಂದರ, ಅರ್ಚನಾ ಪ್ರಸಾದ,ಮಂಜು ಕಾವಸಿ,ವಿನೀತ ತಿವಾರಿ,ಸಂಜಯ ಪರಾಟೆ ಮತ್ತು ಮಂಗಲರಾಮ ಕರ್ಮಾ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2016,ನ.15ರಂದು ಸರ್ವೋಚ್ಚ ನ್ಯಾಯಾಲಯವು ಈ ಆರೂ ಜನ ಹೋರಾಟಗಾರರಿಗೆ ಬಂಧನದ ವಿರುದ್ಧ ರಕ್ಷಣೆಯನ್ನು ನೀಡಿತ್ತು. ಆದರೆ ಪ್ರಕರಣದ ತನಿಖೆಯನ್ನು ಈವರೆಗೆ ನಡೆಸಲಾಗಿಲ್ಲ ಅಥವಾ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿಲ್ಲ ಎಂದು ಕೋರಿ ಅವರು 2018ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ವಿಷಯದಲ್ಲಿ ತನಿಖೆಯನ್ನು ಆರಂಭಿಸಿದ್ದ ಕಾಂಗ್ರೆಸ್ ನೇತೃತ್ವದ ಛತ್ತೀಸ್‌ಗಡ ಸರಕಾರವು 2019,ಫೆಬ್ರವರಿಯಲ್ಲಿ ಎಲ್ಲ ಆರೂ ಜನರು ಅಮಾಯಕರಾಗಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿತ್ತು.

ಈ ವರ್ಷದ ಫೆಬ್ರವರಿಯಲ್ಲಿ, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂಬ ಛತ್ತೀಸ್‌ಗಡ ಪೊಲೀಸರ ಹೇಳಿಕೆಯನ್ನು ಗಮನಕ್ಕೆ ತೆಗೆದುಕೊಂಡಿದ್ದ ಎನ್ನೆಚ್ಚಾರ್ಸಿಯು,ತಮ್ಮ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿದ್ದರಿಂದ ಈ ಮಾನವ ಹಕ್ಕುಗಳ ಹೋರಾಟಗಾರರು ಅನುಭವಿಸಿರುವ ಮಾನಸಿಕ ಯಾತನೆಗೆ ಪ್ರತಿಯಾಗಿ ಅವರಿಗೆ ಆರು ವಾರಗಳಲ್ಲಿ ತಲಾ ಒಂದು ಲ.ರೂ.ಗಳನ್ನು ಪಾವತಿಸುವಂತೆ ಛತ್ತೀಸ್‌ಗಡ ಸರಕಾರಕ್ಕೆ ಸೂಚಿಸಿತ್ತು. ಆದರೆ ಈವರೆಗೆ ತಮಗೆ ಪರಿಹಾರವನ್ನು ಪಾವತಿಸಲಾಗಿಲ್ಲ ಎಂದು ಈ ಹೋರಾಟಗಾರರು ತಿಳಿಸಿದ್ದಾರೆ.

ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದ ಪೊಲೀಸ್ ಅಧಿಕಾರಿಗಳ,ವಿಶೇಷವಾಗಿ ಆಗಿನ ಬಸ್ತಾರ್ ಐಜಿಪಿ ಎಸ್‌ಆರ್‌ಪಿ ಕಲ್ಲೂರಿ ಅವರ ವಿರುದ್ಧ ಸರಕಾರವು ಕಾನೂನು ಕ್ರಮಗಳನ್ನು ಜರುಗಿಸುತ್ತದೆ ಎಂದು ಈ ಹೋರಾಟಗಾರರು ತಮ್ಮ ಹೇಳಿಕೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಪ್ರದೇಶದಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ ಕಡಿವಾಣ ಹಾಕಲು ಛತ್ತೀಸ್‌ಗಡ ಸರಕಾರವೇ ರಚಿಸಿದ್ದ ಸಲ್ವಾ ಜುಡುಂ ಸಾವಿರಾರು ಗ್ರಾಮಸ್ಥರ ಮನೆಗಳನ್ನು ಸುಟ್ಟುಹಾಕಿದ್ದು,ಎನ್ನೆಚ್ಚಾರ್ಸಿಯ 2008ರ ಶಿಫಾರಸುಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಪುನರಪಿ ನಿರ್ದೇಶಗಳ ಹೊರತಾಗಿಯೂ ಸಂತ್ರಸ್ತರಿಗೆ ಪರಿಹಾರವನ್ನು ನೀಡಲಾಗಿಲ್ಲ, ಅತ್ಯಾಚಾರ ಮತ್ತು ಕೊಲೆಗಳನ್ನು ನಡೆಸಿದವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಲಾಗಿಲ್ಲ. 2011,ಜುಲೈನಲ್ಲಿ ಸಲ್ವಾ ಜುಡುಂ ಅನ್ನು ಅಕ್ರಮ ಸಂಘಟನೆ ಎಂದು ಘೋಷಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅದನ್ನು ವಿಸರ್ಜಿಸುವಂತೆ ಆದೇಶಿಸಿತ್ತು. ಆದರೆ ಛತ್ತೀಸಗಡದಲ್ಲಿ ಕಾರ್ಯಾಚರಿಸುತ್ತಿರುವ ಜಾಗೃತ ಗುಂಪುಗಳ ವಿವಿಧ ರೂಪಗಳಲ್ಲಿ ಅದು ಇನ್ನೂ ಮುಂದುವರಿದಿದೆ ಎಂದು ಹೋರಾಟಗಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News