ಯುವಕನ ಅಪಹರಿಸಿ ಹಲ್ಲೆ ಆರೋಪ: ಐವರ ಬಂಧನ

Update: 2020-08-08 11:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.8: ಹಣದ ವಿಚಾರವಾಗಿ ಯುವಕನನ್ನು ಅಪಹರಿಸಿ, ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದಿಲೀಪ್, ಲೋಕೇಶ್, ವಿನಯ್ ಕುಮಾರ್, ಗಣೇಶ್, ದೀಪಕ್ ಬಂಧಿತ ಆರೋಪಿಗಳಾಗಿದ್ದು, ಪ್ರಕರಣದಲ್ಲಿ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅಪಹರಣಕ್ಕೆ ಒಳಗಾಗಿದ್ದ ಕಿರಣ್ ಕುಮಾರ್ ಎಂಬವರು ತೆಂಗಿನಕಾಯಿ ವ್ಯಾಪಾರಿ ಆಗಿದ್ದು, ಇತ್ತೀಚಿಗಷ್ಟೇ ತಮ್ಮ ಬಳಿಯಿದ್ದ ಕಾರನ್ನು ಆರೋಪಿ ದೀಪಕ್‍ಗೆ ಮಾರಾಟ ಮಾಡಲು ಮುಂದಾಗಿದ್ದರು. 4.25 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ಒಪ್ಪಿಗೆ ಆಗಿ 35 ಸಾವಿರ ರೂ. ಮುಂಗಡವಾಗಿ ಕಿರಣ್ ಕುಮಾರ್ ಗೆ ದೀಪಕ್ ಹಣ ನೀಡಿದ್ದ ಎನ್ನಲಾಗಿದೆ.

ಎರಡು ದಿನದ ಬಳಿಕ ಆರೋಪಿ ಕರೆ ಮಾಡಿ ನಾನು ಕಾರು ಖರೀದಿ ಮಾಡುವುದಿಲ್ಲ. ಕೊಟ್ಟಿದ್ದ ಮುಂಗಡ ಹಣ ವಾಪಸ್ ನೀಡುವಂತೆ ಹೇಳಿದ್ದ. ಮುಂಗಡ ಹಣ ಖರ್ಚಾಗಿದ್ದು, ಹಣ ಹೊಂದಿಸಿ ಕೊಡುವುದಾಗಿ ಕಿರಣ್ ಕುಮಾರ್ ಹೇಳಿದ್ದಾರೆ. ಆದರೆ, ಆರೋಪಿ ಗುಂಪು ಕಟ್ಟಿಕೊಂಡು ಕಿರಣ್ ಕುಮಾರ್ ಅನ್ನು ಜು.28ರಂದು ಬಲವಂತವಾಗಿ ಕಾರಿನಲ್ಲಿ ಅಪಹರಿಸಿ ಗಂಭೀರವಾಗಿ ಹಲ್ಲೆ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News