ಬೆಳಗಾವಿಯಲ್ಲಿ 5 ಪರಿಹಾರ ಕೇಂದ್ರಗಳು, 25 ಬೋಟ್‍ಗಳ ವ್ಯವಸ್ಥೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್

Update: 2020-08-08 13:36 GMT

ಬೆಳಗಾವಿ, ಆ.8: ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಈ ಪ್ರವಾಹದ ನಿಯಂತ್ರಣಕ್ಕೆ 5 ಪರಿಹಾರ ಕೇಂದ್ರಗಳ ಪ್ರಾರಂಭ ಹಾಗೂ 25 ಬೋಟ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ತಾಲೂಕು, ಗ್ರಾಮ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಸದ್ಯ ಕೃಷ್ಣಾ ನದಿಯಲ್ಲಿ 1 ಲಕ್ಷ 55 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಅದು 2.5 ಲಕ್ಷ ಕ್ಯೂಸೆಕ್‍ಗೆ ಏರಿಕೆಯಾದರೆ ಜಮೀನು, ಮನೆಗಳಿಗೆ ನೀರು ನುಗ್ಗುವ ಸಂಭವವಿದೆ. ಹೀಗಾಗಿ, ನದಿ ತೀರದ ಹಳ್ಳಿಗಳಲ್ಲಿ ಜನ ಜಾನುವಾರಗಳ ರಕ್ಷಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಜತೆಗೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.

ಪ್ರವಾಹವನ್ನು ಎದುರಿಸಲು ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳೂ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹಾಗೊಂದು ಬಾರಿ ನೀರಿನ ಮಟ್ಟ ಏರಿಕೆಯಾದರೆ ಪ್ರತಿ ಹಳ್ಳಿಯಲ್ಲಿ ಡಂಗೂರ ಸಾರಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.

ಮಹಾರಾಷ್ಟ್ರದ ಕೊಯ್ನಾ ಡ್ಯಾಮ್‍ನಿಂದ ನೀರು ಬಿಡುವ ಕುರಿತು ಅಲ್ಲಿಯ ಜಿಲ್ಲಾಧಿಕಾರಿ ಜತೆ ನಾನೇ ಖುದ್ದು ಸಂಪರ್ಕದಲ್ಲಿದ್ದೇನೆ. ಫೋನ್ ಸಂಪರ್ಕ ಮಾಡಿ ನೀರಿನ ಬಿಡುಗಡೆ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಪ್ರವಾಹದ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ ಎಂದು ಹಿರೇಮಠ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News