ದಕ್ಷಿಣ ಭಾರತದ ಹಲವು ನಾಯಕರು ಪ್ರಧಾನಿಯಾಗುವ ಅವಕಾಶ ಕಸಿದ 'ಹಿಂದಿ ರಾಜಕಾರಣ': ಕುಮಾರಸ್ವಾಮಿ

Update: 2020-08-10 11:48 GMT

ಬೆಂಗಳೂರು, ಆ. 10: `ಭಾಷೆ ಕಾರಣಕ್ಕೆ ತಮಿಳುನಾಡಿನ ಸಂಸದೆ ಕನಿಮೋಳಿ ಅವರನ್ನು `ನೀವು ಭಾರತೀಯರೇ' ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೋಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ. ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಹಿಂದಿ ರಾಜಕಾರಣವು ದಕ್ಷಿಣ ಭಾರತದ ಹಲವು ನಾಯಕರ ಪ್ರಧಾನಿಯಾಗುವ ಅವಕಾಶ ಕಸಿದಿದೆ. ಅದರಲ್ಲಿ ಎಚ್.ಡಿ.ದೇವೇಗೌಡ, ಕರುಣಾನಿಧಿ, ಕಾಮರಾಜರ ಹೆಸರುಗಳು ಪ್ರಧಾನ. ಈ ವ್ಯೂಹವನ್ನು ದೇವೇಗೌಡರು ಭೇದಿಸಿ ಅತ್ಯುನ್ನತ ಪಟ್ಟ ಅಲಂಕರಿಸಿದರಾದರೂ, ಭಾಷೆ ವಿಚಾರಕ್ಕೆ ಅವರನ್ನು ಮೂದಲಿಸಿದ, ಗೇಲಿ ಮಾಡಿದ, ಕನ್ನಡತನ ಪ್ರಶ್ನಿಸಿದ ಪ್ರಸಂಗಗಳು ಆಗಿ ಹೋಗಿವೆ' ಎಂದು ಹೇಳಿದ್ದಾರೆ.

`ಭಾರತದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರಿಂದ ಅಂದು ಕೆಂಪುಕೋಟೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಿಸುವಲ್ಲಿ `ಹಿಂದಿ ರಾಜಕಾರಣ' ಯಶಸ್ವಿಯಾಗಿತ್ತು. ಬಿಹಾರ ಮತ್ತು ಉತ್ತರ ಪ್ರದೇಶದ ಬಹುದೊಡ್ಡ ರೈತ ಸಮುದಾಯದ ದೃಷ್ಟಿಯಿಂದ ಅಂದು ದೇವೇಗೌಡರು ಹಿಂದಿಯಲ್ಲೇ ಮಾತನಾಡಿದರು. ಅಷ್ಟರ ಮಟ್ಟಿಗೆ ಈ ದೇಶದಲ್ಲಿ ಹಿಂದಿ ರಾಜಕಾರಣ ಕೆಲಸ ಮಾಡುತ್ತದೆ' ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

'ಇಂಥದ್ದೇ ಅನುಭವ ನನಗೂ ಆಗಿವೆ. ನಾನೂ 2 ಬಾರಿ ಸಂಸದನಾಗಿದ್ದವನು. ಸಂಸತ್‍ನಲ್ಲಿ ಕನ್ನಡದಲ್ಲಿ ಮಾಡಲಾಗುವ ಭಾಷಣಗಳ ಬಗ್ಗೆ ಆಳುವ ವರ್ಗ ದಿವ್ಯ ನಿರ್ಲಕ್ಷ್ಯ ತೋರುತ್ತದೆ. ಅಲ್ಲದೆ, ಹಿಂದಿ ವ್ಯಾಮೋಹಿ ರಾಜಕಾರಣಿಗಳ ವರಸೆಗಳನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳೆಂದರೆ ಬಹುತೇಕರಿಗೆ ಅಲ್ಲಿ ಅಪತ್ಯವೇ ಸರಿ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

`ರಾಜಕಾರಣ ಹೊರತುಪಡಿಸಿ ಔದ್ಯೋಗಿಕ ಕ್ಷೇತ್ರಕ್ಕೆ ಬಂದರೆ, ಕೇಂದ್ರ ಸರಕಾರದ ಕೆಲ ಹುದ್ದೆಗಳ ಪರೀಕ್ಷೆಗಳನ್ನು ಇಂಗ್ಲಿಷ್, ಹಿಂದಿಯಲ್ಲೇ ಬರೆಯಬೇಕಿದೆ. ಅದರಲ್ಲಿ ಕೂಡ ಒಂದು. ಈ ಬಾರಿಯ ಅಧಿಸೂಚನೆಯಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಹೀಗಾಗಿ ಕನ್ನಡದ ಉದ್ಯೋಗಾಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದು ನಿಲ್ಲಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

`ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು ಎಂದು ಕೇಂದ್ರ ಸರಕಾರ ಬಾಯಿ ಮಾತಿಗಷ್ಟೇ ಹೇಳುತ್ತದೆ. ಆದರೆ, ಹಿಂದಿ ಅಭಿವೃದ್ಧಿಗಾಗಿ ದೇಶ, ವಿದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರವು ಕೋಟ್ಯಂತರ ಮೊತ್ತ ವಿನಿಯೋಗಿಸುತ್ತದೆ. ಇದು ರಹಸ್ಯ ಕಾರ್ಯಸೂಚಿಗಳಲ್ಲೊಂದು. ಪ್ರಾಮಾಣಿಕ ಭಾಷಾಭಿಮಾನದಿಂದ ಮಾತ್ರ ಇವುಗಳನ್ನು ಮೆಟ್ಟಿಸಲು ಸಾಧ್ಯ. `ಭಾಷೆ ಪಂಥ ನಡಿದ್ಹಾಂಗಾಗಲಿ, ಹಾಸ್ಯ ಮಾಡಿ ಜನರೆಲ್ಲರು ನಗಲಿ, ಈ ಶಿಶುನಾಳಧೀಶ ಸದ್ಗುರುವಿನ, ಲೇಸಾದ ದಯವೊಂದು ಕಡೆತನಕಿರಲಿ' ಎಂದು ಶಿಶುನಾಳ ಶರೀಫರ ಕಾವ್ಯವನ್ನು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News