ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲ ಗುರಿಗಳನ್ನು ತಲುಪಲು 'ಟಾರ್ಗೆಟ್ 2030': ಡಿಸಿಎಂ ಡಾ.ಅಶ್ವತ್ಥ ನಾರಾಯಣ

Update: 2020-08-17 13:08 GMT

ಬೆಂಗಳೂರು, ಆ. 17: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿಗದಿ ಮಾಡಲಾಗಿರುವ ಎಲ್ಲ ಗುರಿಗಳನ್ನು 2030ರ ವೇಳೆಗೆ ಸಂಪೂರ್ಣವಾಗಿ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರ, ಮುಂದಿನ ಮೂರು ವರ್ಷಗಳಲ್ಲಿ 6 ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯ, 10 ಬೋಧನಾ ಕೇಂದ್ರಿತ ವಿಶ್ವವಿದ್ಯಾಲಯ ಹಾಗೂ 34 ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ತೀರ್ಮಾನಿಸಿದೆ.

ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಕುರಿತು ರಚಿಸಲಾಗಿರುವ ಕಾರ್ಯಪಡೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಜತೆ ಸೇರಿ ಮಹತ್ವದ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, 'ಹೊಸದಾಗಿ ಆರಂಭವಾಗುವ ಈ ಸಂಸ್ಥೆಗಳ ಮೂಲಕ ಪ್ರತಿ ಜಿಲ್ಲೆಯಲ್ಲೂ ಗುಣಮಟ್ಟದ ಶಿಕ್ಷಣ, ಬೋಧನೆ ಹಾಗೂ ಸಂಶೋಧನೆಗೆ ಪೂರಕವಾದ ಮುಕ್ತ ಅವಕಾಶ ಕಲ್ಪಿಸಲಾಗುವುದು' ಎಂದರು.

ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕಾರ್ಯಪಡೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಒಂದು ಕರಡು ಪ್ರತಿಯನ್ನು ಸರಕಾರಕ್ಕೆ ನೀಡಲಿದೆ. ಈ ತಿಂಗಳ 29ರೊಳಗೆ ನೀತಿಯ ಸಮಗ್ರ ಜಾರಿಯ ಬಗ್ಗೆ ಪರಿಪೂರ್ಣ ನೀಲನಕ್ಷೆಯನ್ನು ಸಲ್ಲಿಸಲಿದೆ. ಸಮಾಜದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಸಂಜೀವಿನಿ ಎಂಬುದು ಸರಕಾರದ ಬಲವಾದ ನಂಬಿಕೆ. ಈ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಏನೆಲ್ಲ ಬದಲಾವಣೆ ತರಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರವಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪಡೆ ಜತೆ ಸಮಾಲೋಚನೆ ನಡೆಸಿ ಮುಂದಿನ ಕಾರ್ಯಕ್ರಮಗಳನ್ನು ಅಂತಿಮಗೊಳಿಸಲಾಗುವುದು ಎಂದರು.

ಕ್ಷಿಪ್ರಗತಿಯಲ್ಲಿ ಕ್ರಮ: ಕಾರ್ಯಪಡೆ ನೀಲನಕ್ಷೆಯನ್ನು ಸಲ್ಲಿಸಿದ ಕೂಡಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನೊಳಗೊಂಡು ಸಿಎಂ ಜತೆ ಸಮಾಲೋಚನೆ ನಡೆಸಲಾಗುವುದು. ನೀತಿಯ ಜಾರಿಗೆ ಅಗತ್ಯವಾಗಿರುವ ಕಾನೂನು ತಿದ್ದುಪಡಿ, ಆಡಳಿತ ಸುಧಾರಣೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಕ್ಷಿಪ್ರಗತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯಿಂದ ಈ ನೀತಿಯನ್ನು ಜಾರಿ ಮಾಡಲಾಗುವುದು ಎಂದರು.

ಟಾರ್ಗೆಟ್ 2030: ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣವಾಗಿ ಜಾರಿ ಮಾಡಿ ಅದರ ಎಲ್ಲ ಗುರಿಗಳನ್ನು ತಲುಪಲು ಮುಂದಿನ 10 ವರ್ಷಗಳ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅದನ್ನು ಟಾರ್ಗೆಟ್-2030 ಎಂದು ಪರಿಗಣಿಸಿದ್ದೇವೆ. ನೀತಿಯ ಅನುಷ್ಟಾನದ ಎಲ್ಲ ಫಲಿತಾಂಶಗಳು ಈ ಅವಧಿಯಲ್ಲಿ ಗೋಚರವಾಗಲೇಬೇಕು. ಆ ನಿಟ್ಟಿನಲ್ಲಿ ಸರಕಾರ ಎಲ್ಲ ಕಾರ್ಯಸೂಚಿಯನ್ನು ಹಾಕಿಕೊಳ್ಳುತ್ತಿದೆ. ಸದ್ಯಕ್ಕೆ ರಾಜ್ಯವು ನೆರೆ ಮತ್ತು ಕೋವಿಡ್ ಬಿಕ್ಕಟ್ಟಿಗೆ ಗುರಿಯಾಗಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಡಿ ಇಡಲಾಗುವುದು. ಆ ದಾರಿಯಲ್ಲಿ ಸರಕಾರಕ್ಕೆ ಕಾರ್ಯಪಡೆಯು ನೆರೆವಾಗಲಿದೆ ಎಂದು ನುಡಿದರು.

ರಾಜ್ಯವ್ಯಾಪಿ ಆಂದೋಲನ: ಒಂದು ವರ್ಷ ರಾಜ್ಯದೆಲ್ಲೆಡೆ ಶಿಕ್ಷಣ ನೀತಿಯದ್ದೇ ಚರ್ಚೆ ನಡೆಯಬೇಕು. ಎಲ್ಲ ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳು ಹಾಗೂ ಸಮಾಜದ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುವುದು. ಅದಕ್ಕಾಗಿ ರಾಜ್ಯವ್ಯಾಪಿ ದೊಡ್ಡ ಆಂದೋಲನವನ್ನೇ ಹಮ್ಮಿಕೊಳ್ಳಲಾಗುವುದು. ಈ ಆಂದೋಲನದಲ್ಲಿ ಸರಕಾರವೇ ಭಾಗಿಯಾಗಲಿದ್ದು, ಶಿಕ್ಷಣ ತಜ್ಞರು ಮತ್ತು ಕಾರ್ಯಪಡೆ ಸದಸ್ಯರೆಲ್ಲರೂ ಇರುತ್ತಾರೆ. ಕಾರ್ಯಪಡೆಯ ರೋಡ್‍ಮ್ಯಾಪ್ ಕೈಗೆ ಸಿಕ್ಕ ಕೂಡಲೇ ಈ ಆಂದೋಲನವನ್ನು ಆರಂಭಿಸಲಾಗುವುದು. ಎಲ್ಲ ತಯಾರಿ ಮತ್ತು ಪೂರ್ವಸಿದ್ಧತೆಯನ್ನು ಮಾಡಿಕೊಂಡೇ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದರು.

ಗುಣಮಟ್ಟದ ಶಿಕ್ಷಣ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಎಲ್ಲ ವ್ಯವಸ್ಥೆಯೂ ಆಗಬೇಕು. ಅದಕ್ಕಾಗಿ ದಕ್ಷತೆಯುಳ್ಳ, ಗುಣಮಟ್ಟದ ಹಾಗೂ ಬಹುಶಿಸ್ತಿನ ಶಿಕ್ಷಣ ಸಂಸ್ಥೆಗಳು ಬರುವಂತೆ ನೋಡಿಕೊಳ್ಳಬೇಕು. ಹಾಲಿ ಇರುವ ಶಿಕ್ಷಣ ಸಂಸ್ಥೆಗಳನ್ನು ಆ ಮಟ್ಟಕ್ಕೆ ಎತ್ತರಿಸಬೇಕು. ಅದೇ ಕಾಲೇಜುಗಳನ್ನು ಈಗಿನ ಸ್ಥಿತಿಯಿಂದ ಸುಧಾರಿಸಬೇಕು. ಗುಣಮಟ್ಟದ ಸಂಶೋಧನೆ ಮತ್ತು ಬೋಧನೆಗೆ ವ್ಯವಸ್ಥೆ ಮಾಡಬೇಕು ಎಂದು ಕಾರ್ಯಪಡೆಯ ಸದಸ್ಯರು ಸರಕಾರಕ್ಕೆ ಸಲಹೆ ಮಾಡಿದರು ಎಂದು ತಿಳಿಸಿದರು.

ಶಾಸಕ ಅರುಣ ಶಹಾಪುರ, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಕಟ್ಟಿಮನಿ, ಶಿಕ್ಷಣ ನೀತಿ ಜಾರಿಗೆ ರಚಿಸಿರುವ ಕಾರ್ಯಪಡೆ ಅಧ್ಯಕ್ಷ ಎಸ್.ವಿ.ರಂಗನಾಥ, ವಿಶ್ರಾಂತ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಅಜೀಂ ಪ್ರೇಮ್‍ಜಿ ವಿವಿ ಕುಲಪತಿ ಪ್ರೊ.ಅನುರಾಗ್ ಬೆಹರ್, ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್, ಸೃಷ್ಟಿ ಸಂಸ್ಥೆ ನಿರ್ದೇಶಕಿ ಡಾ.ಗೀತಾ ನಾರಾಯಣನ್, ಪದವಿ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News