ಡಕಾಯಿತರ ದಾಳಿಗೆ ಕ್ರಿಕೆಟಿಗ ರೈನಾರ ಮಾವ ಬಲಿ

Update: 2020-08-29 16:44 GMT

   ಚಂಡೀಗಢ, ಆ.29: ಇಲ್ಲಿನ ಪಠಾಣ್‌ಕೋಟ್ ಜಿಲ್ಲೆಯ ಥಾರಿಯಾಲ್ ಗ್ರಾಮದಲ್ಲಿ ಇತ್ತೀಚೆಗೆ ದರೋಡೆಕೋರರ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಕ್ರಿಕೆಟಿಗ ಸುರೇಶ್ ರೈನಾರ ಮಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆಗಸ್ಟ್ 19 ಮತ್ತು 20ರ ಮಧ್ಯ ರಾತ್ರಿ ಡಕಾಯಿತರ ಗ್ಯಾಂಗ್ ದಾಳಿ ನಡೆಸಿದ ಪರಿಣಾಮವಾಗಿ ರೈನಾರ ಮಾವ ಗುತ್ತಿಗೆದಾರ ಅಶೋಕ್ ಸೇರಿದಂತೆ ಕುಟುಂಬದ ಐದು ಮಂದಿ ಗಾಯಗೊಂಡಿದ್ದರು. ಈ ಪೈಕಿ ರೈನಾರ ಮಾವ ಅಶೋಕ್ ಕುಮಾರ್ (58)ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಕುಖ್ಯಾತ ಡಕಾಯಿತ ಗ್ಯಾಂಗ್‌ಗೆ ಸೇರಿದ ಮೂರರಿಂದ ನಾಲ್ಕು ಮಂದಿಯ ತಂಡ ಲೂಟಿ ಮಾಡುವ ಉದ್ದೇಶದಿಂದ ಪಠಾಣ್‌ಕೋಟ್‌ನ ಮಾಧೋಪುರ ಬಳಿಯ ಥಾರಿಯಾಲ್ ಗ್ರಾಮದಲ್ಲಿರುವ ಅವರ ಮನೆಗೆ ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ, ಅಶೋಕ್ ಕುಮಾರ್ ತಮ್ಮ ಮನೆಯ ಟೆರೇಸ್‌ನಲ್ಲಿ ಮಲಗಿದ್ದರು.

ಕುಮಾರ್ ಅವರ 80 ವರ್ಷದ ತಾಯಿ ಸತ್ಯ ದೇವಿ, ಅವರ ಪತ್ನಿ ಆಶಾ ದೇವಿ, ಪುತ್ರರಾದ ಅಪಿನ್ ಮತ್ತು ಕುಶಾಲ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸತ್ಯ ದೇವಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಠಾಣ್‌ಕೋಟ್ ಪೊಲೀಸ್ ವರಿಷ್ಠಾಧಿಕಾರಿ ಪ್ರಭೋತ್ ಸಿಂಗ್ ವಿರ್ಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News