ಭಾರೀ ಮಳೆ, ಪ್ರವಾಹ: ರಾಜ್ಯದಲ್ಲಿ 89 ಸಾವಿರ ಹೆಕ್ಟೇರ್ ನಷ್ಟು ಬೆಳೆಗೆ ಹಾನಿ

Update: 2020-08-30 17:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 30: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಪ್ರಮಾಣದ ಮಳೆ ಹಾಗೂ ಪ್ರವಾಹದ ಪರಿಣಾಮ ಸುಮಾರು 89 ಸಾವಿರ ಹೆಕ್ಟೇರ್ ನಷ್ಟು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉತ್ತರಕನ್ನಡ, ಉಡುಪಿ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬೆಳೆ ಮಳೆಗೆ ಹಾನಿಯಾಗಿದೆ.

ಮುಸುಕಿನ ಜೋಳ, ಈರುಳ್ಳಿ, ಜೋಳ, ರಾಗಿ, ಭತ್ತ, ಕಬ್ಬು, ಹತ್ತಿ, ತೊಗರಿ, ಉದ್ದು, ಸೂರ್ಯಕಾಂತಿ, ಸಜ್ಜೆ, ಶೇಂಗಾ, ಎಳ್ಳು, ತಂಬಾಕು, ಸೋಯಾಬಿನ್ ಬೆಳೆಗಳು ನೆಲಕಚ್ಚಿವೆ. ಇದರ ಜೊತೆಗೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಸಪೋಟ, ತರಕಾರಿಗಳಾದ ಟೊಮ್ಯಾಟೊ, ಬದನೆ, ಕೋಸ್ ಮತ್ತಿತರ ಬೆಳೆಗಳು ನಷ್ಟವಾಗಿದೆ.

ರಾಜ್ಯದಲ್ಲಿ ಸುಮಾರು 89 ಸಾವಿರ ಎಕರೆ ಬೆಳೆ ಹಾನಿ ಆಗಿದ್ದು, ಅಂದಾಜು ಒಟ್ಟು 3,500 ದಿಂದ 4 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಇತ್ತೀಚೆಗೆ ಮಾಹಿತಿ ನೀಡಿದ್ದರು.

ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಪ್ರವಾಹದಿಂದ 3,500 ರಿಂದ 4,000 ಕೋಟಿ ರೂ. ನಷ್ಟವಾಗಿದೆ. ಸುಮಾರು 89 ಸಾವಿರ ಎಕರೆ ಬೆಳೆ ಪ್ರವಾಹಕ್ಕೆ ತುತ್ತಾಗಿದೆ. ಪ್ರಧಾನಿಯವರಿಗೆ ನಾವು ಮನವರಿಕೆ ಮಾಡಿಕೊಡುತ್ತೇವೆ. ಕೇಂದ್ರ ಸರ್ಕಾರ ಎನ್ಡಿಆರ್‍ಎಫ್ ನಿಯಮಗಳ ಪ್ರಕಾರ ಪರಿಹಾರ ಕೊಡುತ್ತದೆ ಎಂದು ಹೇಳಿದ್ದಾರೆ.

ಈ ಬಾರಿ ಬಾಗಲಕೋಟೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31 ರಷ್ಟು ಹೆಚ್ಚು ಮಳೆಯಾಗಿದೆ. ಪ್ರವಾಹ ಹಾಗೂ ಮಳೆಯಿಂದಾಗಿ 22,473 ಹೆಕ್ಟೇರ್ ಕೃಷಿ ಬೆಳೆ,12,388 ಹೆಕ್ಟೇರ್ ತೋಟಗಾರಿಕೆ ಬೆಳೆ, 8.4 ಹೆಕ್ಟೇರ್ ರೇಷ್ಮೆ ಬೆಳೆ ಸೇರಿ ಒಟ್ಟು 34,869.40 ಹೆಕ್ಟೇರ್ ಬೆಳೆ ಹಾನಿಯಾಗಿದೆ.

ರಾಜ್ಯದಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಈರುಳ್ಳಿ ಬೆಳೆಗೆ ಫಂಗಸ್ ನಿಂದ `ಸ್ಟೆಂ ಫೀಲಿಯಂ' ರೋಗ ಕಾಣಿಸಿಕೊಂಡಿದೆ. ಇದರಿಂದ ಸಾವಿರಾರು ಹೆಕ್ಟೇರ್ ಈರುಳ್ಳಿ ನಷ್ಟವಾಗುವ ಆತಂಕ ಸೃಷ್ಟಿಯಾಗಿದೆ. ಪರಿಣಾಮ ಈರುಳ್ಳಿ ಬೆಲೆ ದುಬಾರಿ ಆಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ 2020-21ನೇ ಸಾಲಿನ ಮುಂಗಾರು ಮಳೆ ಆಧಾರವಾಗಿ 1,52,366 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಬಳ್ಳಾರಿ, ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ಬೆಳಗಾವಿ, ಚಿತ್ರದುರ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುತ್ತಿದ್ದು, ಎಲ್ಲ ಭಾಗದಲ್ಲಿ ಈ ರೋಗ ಪತ್ತೆಯಾಗಿದೆ. ಇದರಿಂದಾಗಿ ಶೇ.20 ಎಂದರೆ 1.52 ಲಕ್ಷ ಹೆಕ್ಟೇರ್ ನನಲ್ಲಿ 30 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ನಷ್ಟವಾಗಲಿದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ.

ರಾಜ್ಯದ ಹಲವು ಭಾಗಗಳಲ್ಲಿ ಹೆಚ್ಚು ಮಳೆಯಾಗಿದ್ದು, ಇನ್ನು ಕೆಲ ಭಾಗಗಳಲ್ಲಿ ಮಳೆ ಕಡಿಮೆಯಾಗಿರುವುದರಿಂದ ತರಕಾರಿ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಬದನೆ, ಹೀರೇಕಾಯಿ, ನುಗ್ಗೆಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಗಳ ಬೆಲೆ ಏರಿಕೆಯಾಗಿದೆ. ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯಲಾದ ತರಕಾರಿ ಹಾಗೂ ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ. ಬೇರೆ ಜಿಲ್ಲೆಗಳ ತರಕಾರಿ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ರವಾನೆಯಾಗುತ್ತಿದೆ. ಒಂದು ಕಡೆ ವ್ಯಾಪಕ ಮಳೆ, ಇನ್ನೊಂದು ಕಡೆ ಮಳೆ ಕಡಿಮೆಯಾಗಿರುವುದರಿಂದ ತರಕಾರಿ ಬೆಳೆಗಳು ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಇದರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುರೇಶ್.

ಬೆಳೆ ನಷ್ಟ ಹೆಕ್ಟೇರ್ ಗಳಲ್ಲಿ:

ಮುಸುಕಿನ ಜೋಳ: 22,289

ಜೋಳ: 232

ರಾಗಿ: 16.44

ತೊಗರಿ: 18,592

ಕಬ್ಬು: 21160

ಶೇಂಗಾ: 3199.33

ಭತ್ತ: 8947

ಸೋಯಾ: 9986

ಹೆಸರು: 37623

ತಂಬಾಕು: 140

ಇತರ ಧಾನ್ಯಗಳು: 4911.83 ಹೆಕ್ಟೇರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News