ರಾಜ್ಯದಲ್ಲಿ ಕೊರೋನ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಘಾತಕಾರಿ: ಎಚ್.ಕೆ.ಪಾಟೀಲ್

Update: 2020-08-31 13:37 GMT

ಬೆಂಗಳೂರು, ಆ. 31: `ರಾಜ್ಯದಲ್ಲಿ ಕೊರೋನ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಘಾತಕಾರಿ. ಮಾತ್ರವಲ್ಲ ಗಾಬರಿಗೊಳಿಸುವ ಸ್ಥಿತಿ. ಈ ಬಗ್ಗೆ ಚರ್ಚಿಸಿ, ವಾಸ್ತವಾಂಶ ಅರ್ಥೈಸಿ ಸರಕಾರ ಗಂಭೀರ ಹೆಜ್ಜೆಗಳನ್ನಿರಿಸಬೇಕು. ಅಂಕಿ ಅಂಶ ಬಚ್ಚಿಡುವುದಾಗಲಿ, ಜನರಿಗೆ ತಪ್ಪು ಮಾಹಿತಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸತ್ಯ ಎಲ್ಲರಿಗೂ ತಿಳಿದಿರಲಿ' ಎಂದು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಸೋಮವಾರ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ನಿಂದ ಸಾವಿನ ಹೆಚ್ಚಳದಿಂದ ಉದ್ಬವಿಸಿರುವ ಗಂಭೀರ ಸನ್ನಿವೇಶದಲ್ಲಿ ವಿಪಕ್ಷಗಳು, ತಜ್ಞರು, ವೈದ್ಯರನ್ನು ತುರ್ತು ಸಭೆ ಕರೆದು ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಲು ಸತ್ಯವಾದ ಅಂಕಿ ಅಂಶ ಹಾಗೂ ವಸ್ತುಸ್ಥಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೆ ಸಾವುಗಳ ಸಂಖ್ಯೆ ಮಿತಿಮೀರಿದ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಬೆಂಗಳೂರು ನಗರವೊಂದರಲ್ಲಿಯೇ ಜನವರಿಯಿಂದ ಜುಲೈ ತಿಂಗಳವರೆಗೆ 49,135 ಸಾವಿನ ಪ್ರಕರಣಗಳು ವರದಿಯಾಗಿವೆ. ಚಿತಾಗಾರ, ಸ್ಮಶಾನ ಮತ್ತು ರುದ್ರಭೂಮಿಗಳಲ್ಲಿ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಗಳ ಈ ಅಂಕಿಸಂಖ್ಯೆ ಗಾಬರಿ ಹುಟ್ಟಿಸುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಸಾವುಗಳ ಸಂಖ್ಯೆ 37,001 ಇತ್ತು. ಈ ವರ್ಷ ಹೆಚ್ಚುವರಿ 12,136 ಜನರು ಸಾವಿಗೀಡಾಗಿರುವ ಕಳವಳಕಾರಿ ಸ್ಥಿತಿ ಬಯಲಾಗಿದೆ. ಇದು ಶೇ.32ರಷ್ಟು ಹೆಚ್ಚಳ ದಾಖಲಿಸಿದೆ ಎಂದು ಅವರು ವಿವರಿಸಿದರು.

ಕೊರೋನದಿಂದ ಸಾವಿಗೀಡಾದವರ ಸಂಖ್ಯೆ ಮಾರ್ಚ್ ನಿಂದ ಆಗಸ್ಟ್ ವರೆಗೆ 1,886 ಎಂದು ಸರಕಾರ ಪ್ರಕಟಿಸಿದೆ. ಒಂದು ವೇಳೆ ಈ ಅಂಕಿಸಂಖ್ಯೆಯೇ ಅಂತಿಮವಾಗಿದ್ದರೆ ಕೊರೋನೇತರ ಸಾವುಗಳ ಸಂಖ್ಯೆ 10,250 ಹೆಚ್ಚುವರಿ ಎಂದಾಯಿತು. 49 ಸಾವಿರ ಸಾವುಗಳಲ್ಲಿ ಕೇವಲ 1,886 ಕೋರೋನ ಸಾವುಗಳಾಗಿದ್ದರೆ 47,114 ಜನ ಕೊರೋನೇತರ ಕಾರಣಗಳಿಂದ ಮೃತಪಟ್ಟಿದ್ದಾರೆ. ಈ ಸಾವುಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುವುದಕ್ಕೆ ಕಾರಣಗಳು ಏನು. ಈ ಸಾವಿನ ಅಂಕಿಸಂಖ್ಯೆ ಮುಚ್ಚಿಡಲು ಕಾರಣಗಳೇನು? ಕೊರೋನ ಸಾವಿನ ಸಂಖ್ಯೆ ಕಡಿಮೆ ಪ್ರಮಾಣ ತೋರಿಸಲು ಈ ಅಚಾತುರ್ಯ/ದುರುದ್ದೇಶದ ಪ್ರಯತ್ನವಾಗಿದೆಯೇ? ಎಂದು ಪಾಟೀಲ್ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸರಕಾರ ಜನವರಿ ತಿಂಗಳಿಂದ ಇಲ್ಲಿಯವರೆಗೂ ಸಾವಿನ ಸಂಖ್ಯೆಗಳ ಲೆಕ್ಕಪರಿಶೋಧನೆ ಮತ್ತು ಸಾವಿನ ಕಾರಣಗಳ ವೈದ್ಯಕೀಯ ಪರಿಶೋಧನೆ ಮಾಡಿಯೇ ಇಲ್ಲ. ಇದರಿಂದಾಗಿ ವಾಸ್ತವಿಕವಾಗಿ ಸಾವು ಯಾವುದಕ್ಕೆ ಸಂಭವಿಸಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಗಣಿಸಲು ಆಗಿಯೇ ಇಲ್ಲ. ಇದರ ಜೊತೆಗೆ ಸಾವಿನ ಕಾರಣಗಳ ವೈದ್ಯಕೀಯ ಪ್ರಮಾಣೀಕರಣ ಮಾಡಬೇಕಾಗಿತ್ತು. ಒಂದು ವೇಳೆ ನಗರದಲ್ಲಿ ಕೊರೋನ ಸಾವಿನ ಸಂಖ್ಯೆ ಕೇವಲ 1,886 ಎಂದು ಮಾತ್ರವಿದ್ದರೆ, 10,250 ಸಾಮಾನ್ಯ ಸಾವಿನ ಹೆಚ್ಚಳ(ಇತರೆ ಕಾರಣದಿಂದ) ಸಂಖ್ಯೆ ಅತ್ಯಂತ ಗಂಭೀರವಾದದ್ದು. ಈ ಬಗ್ಗೆ ಸರಕಾರ ವಿವರಣೆ ನೀಡಬೇಕೆಂದು ಅವರು ಒತ್ತಾಯಿಸಿದರು.

ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಉಸಿರಾಟದ ತೊಂದರೆಯಿಂದ, ಶ್ವಾಸಕೋಶದ ಪರಿಣಾಮಕಾರಿ ಕಾರ್ಯನಿರ್ವಹಣೆಯ ವೈಫಲ್ಯದಿಂದ ಸಾವುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದೆ. ಒಟ್ಟು ಆಕ್ಸಿಜನ್ ಕೊರತೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಎಚ್‍ಎಫ್‍ಎನ್‍ಸಿ ಅಳವಡಿಕೆಗೆ ಹಿಂದೇಟು, ಅಗತ್ಯ ತುರ್ತಿನ ಇಂಜಕ್ಷನ್‍ಗಳ ಪೂರೈಕೆಯಲ್ಲಿ ಅವಾಂತರ, ಈ ಹಿನ್ನೆಲೆಯಲ್ಲಿ ಕೊರೋನದಿಂದ ಸಾವುಗಳ ಸಂಖ್ಯೆ ಹೆಚ್ಚಿದ್ದು ಸ್ಪಷ್ಟವಾಗಿದೆ. ಬೆಂಗಳೂರು ನಗರ ಒಂದರಲ್ಲಿಯೇ ಸಾವಿನ ಸಂಖ್ಯೆ ಕಳೆದ ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಶೇ.32ರಷ್ಟು ಹೆಚ್ಚಳ ಕಂಡಿರುವುದು ಆಘಾತಕಾರಿ ಅಂಶ. ರಾಜ್ಯದಲ್ಲಿ ಉಸಿರಾಟದ ತೊಂದರೆಯಿಂದಲೇ ಮೃತರ ಸಂಖ್ಯೆ ಶೇ.8.5ಕ್ಕೆ ಮುಟ್ಟಿದೆ ಎಂಬ ಅಂಕಿಅಂಶ ಹರಿದಾಡುತ್ತಿದೆ ಎಂದು ಅವರು ತಿಳಿಸಿದರು.

ಈ ಆಘಾತಕಾರಿ ಮಾಹಿತಿ ಬಚ್ಚಿಡುವಿಕೆ ಇಂಥ ಮಹಾಮಾರಿಯಿಂದಿರುವ ಸಂಕಷ್ಟ ಕಾಲದಲ್ಲಿ ಅನಾಹುತಕ್ಕೆ ಕಾರಣವಾಗಬಹುದು. ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸರಕಾರ ಕೊಟ್ಟಿರುವ ಅಂಕಿಸಂಖ್ಯೆಗಳ ಪ್ರಕಾರವೆ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ರಾಷ್ಟ್ರದ ಸರಾಸರಿಯ ದುಪ್ಪಟ್ಟಾಗಿದೆ. ದೇಶದಲ್ಲಿ ಮೃತರ ಸಂಖ್ಯೆ ದಶಲಕ್ಷಕ್ಕೆ 42 ಇದ್ದರೆ, ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ತಲುಪಿದೆ. ಸರಕಾರ ಸರಿಯಾದ ಅಂಕಿಅಂಶ ಪ್ರಾಮಾಣಿಕವಾಗಿ ಜನತೆ ಜೊತೆಗೆ ಹಂಚಿಕೆ ಮಾಡಿಕೊಳ್ಳಲಿಲ್ಲ. ಸಾವಿನ ಸಂಖ್ಯೆ ಈ ಪ್ರಮಾಣದ ಹೆಚ್ಚಳ ಕುರಿತ ತ್ವರಿತ ಅಧ್ಯಯನದ ವರದಿ ಪಡೆಯಲು ಕ್ರಮ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News