ಸಂದರ್ಭಕ್ಕೆ ತಕ್ಕಂತೆ ಆರೋಪ ಮಾಡುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು: ಸಚಿವ ಜಗದೀಶ್ ಶೆಟ್ಟರ್

Update: 2020-09-01 12:27 GMT

ಯಾದಗಿರಿ, ಸೆ. 1: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಲಕ್ಕೆ ತಕ್ಕಂತೆ ಆರೋಪ ಮಾಡುತ್ತಿದ್ದು, ಇದಕ್ಕೆ ಯಾವುದೇ ಅರ್ಥವಿಲ್ಲ. ಡ್ರಗ್ಸ್ ಮಾಫಿಯಾದಿಂದ ಮೈತ್ರಿ ಸರಕಾರ ಉರುಳಿತು ಎಂದು ಅವರು ಅಂದೇ ಏಕೆ ಬಹಿರಂಗಪಡಿಸಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ಮಂಗಳವಾರ ಜಿಲ್ಲೆಯ ಕಡೆಚುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಣ ಮತ್ತು ಕಾಂಗ್ರೆಸ್‍ನ ಕೆಲ ಗುಂಪುಗಳು ತಂತ್ರಗಾರಿಕೆ ಮಾಡುವ ಮೂಲಕ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನ ಮಾಡಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದೀಗ ಡ್ರಗ್ಸ್ ಮಾಫಿಯಾದಿಂದ ತಮ್ಮ ಸರಕಾರ ಬಿತ್ತು ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಸಂದರ್ಭಕ್ಕೆ ತಕ್ಕಂತೆ ಆರೋಪ ಮಾಡುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಗುಪ್ತಚರ ಮಾಹಿತಿ ಇರಬೇಕಿತ್ತು. ಆಗ ಮಾದಕ ದ್ರವ್ಯ (ಡ್ರಗ್ಸ್) ಮಾಫಿಯಾ ಇರಲಿಲ್ಲವೇ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.

ರಾಜ್ಯ ಸರಕಾರ ಹಾಗೂ ಗೃಹ ಇಲಾಖೆ ಮಾದಕ ದ್ರವ್ಯ (ಡ್ರಗ್ಸ್) ಮಾಫಿಯಾವನ್ನು ಯಾವುದೇ ಕಾಣರಕ್ಕೂ ಬಿಡುವುದಿಲ್ಲ. ಅವರು ಎಷ್ಟೇ ದೊಡ್ಡವರಿದ್ದರೂ ಹತ್ತಿಕ್ಕುವ ಪ್ರಯತ್ನ ಮಾಡಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ ಎಂದು ಜಗದೀಶ್ ಶೆಟ್ಟರ್ ಇದೇ ವೇಳೆ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News