ಸಂವಿಧಾನ ಉಳಿವಿಗಾಗಿ ಸೈದ್ದಾಂತಿಕ ಒಗ್ಗಟ್ಟು ಅಗತ್ಯ: ನಟ ಚೇತನ್
ಬೆಂಗಳೂರು, ಸೆ.3: ಕೋಮುವಾದಿ ಶಕ್ತಿಗಳಿಂದ ಸಮಾನತೆ, ಸೌಹಾರ್ದತೆ, ಸಹಿಷ್ಣುತೆಯ ಮೌಲ್ಯಗಳನ್ನು ಒಳಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನವನ್ನು ಉಳಿಸಲು ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಿದೆ ಎಂದು ನಟ ಚೇತನ್ ಅಭಿಪ್ರಾಯಿಸಿದ್ದಾರೆ.
ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಸೆ.5ರಂದು ದೇಶಾದ್ಯಂತ ಹಮ್ಮಿಕೊಂಡಿರುವ ‘ನಾವೆದ್ದು ನಿಲ್ಲದಿದ್ದರೆ’ ಅಭಿಯಾನದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಅವರು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸೈದ್ಧಾಂತಿಕ ಒಗ್ಗಟ್ಟಿನಿಂದ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಸಂವಿಧಾನದ ಮೌಲ್ಯಗಳ ಉಳಿಸಬೇಕಾದವರೆ, ತಮ್ಮ ಸ್ವಾರ್ಥಕ್ಕಾಗಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಗಾಗಿರುವ ರೈತರು, ಕಾರ್ಮಿಕರು, ಮಹಿಳೆಯರು, ದಲಿತರು, ಆದಿವಾಸಿಗಳು ಒಟ್ಟಾಗಿ ಜಾತ್ಯತೀತ, ಸಹಿಷ್ಣುತೆಯ ಭಾರತವನ್ನು ಕಟ್ಟೋಣವೆಂದು ಅವರು ತಿಳಿಸಿದ್ದಾರೆ.