ಮಾರಕಾಸ್ತ್ರಗಳಿಂದ ಹೊಡೆದು ವೃದ್ಧೆಯ ಕೊಲೆ
Update: 2020-09-03 11:51 GMT
ಬೆಂಗಳೂರು, ಸೆ.3: ಒಂಟಿಯಾಗಿದ್ದ ವೃದ್ಧೆಯೊಬ್ಬರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಲಿಂಗರಾಜಪುರದ ಮಾರುತಿ ಸೇವಾನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಮಾರುತಿ ಸೇವಾನಗರದ ಕಾಂತಮ್ಮ(73) ಕೊಲೆಯಾದವರು. ಕೃತ್ಯವೆಸಗಿದ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದ್ದು, ಆದಷ್ಟು ಶೀಘ್ರ ಬಂಧಿಸಲಾಗುವುದೆಂದು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.
ಕಾಂತಮ್ಮ ಅವರ 40 ವಯಸ್ಸಿನ ಪುತ್ರಿ ಮಾನಸಿಕ ಅಸ್ವಸ್ಥರಾಗಿದ್ದು, ಬುಧವಾರ ಮಧ್ಯಾಹ್ನ ಆಕೆ ಹೊರ ಹೋಗಿದ್ದಾಗ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಕಾಂತಮ್ಮ ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೈಯಲ್ಲಿದ್ದ 40 ಗ್ರಾಂ ತೂಕದ ಬಳೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕೃತ್ಯ ನಡೆದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿ ಕೃತ್ಯ ನಡೆಸಿದವರ ಸುಳಿವು ಪತ್ತೆ ಹಚ್ಚಿ ಬಂಧನ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.