ಕೊಡಗು: ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ

Update: 2020-09-08 17:34 GMT

ಮಡಿಕೇರಿ, ಸೆ.8 : ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ಕೂಡಿಗೆಯಲ್ಲಿನ ಸೈನಿಕ ಶಾಲೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ತಂಡ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿದರು.

ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ ಭಾರತ ಸರ್ಕಾರದ ವಿತ್ತ ಸಚಿವಾಲಯದ ಡಾ.ಭಾತೇರ್ಂದು ಕುಮಾರ್ ಸಿಂಗ್ ಹಾಗೂ ಕೆ.ಎಸ್.ಡಿ.ಎಂ.ಎ.ಆಯುಕ್ತರಾದ ಮನೋಜ್ ರಂಜನ್ ಅವರ ತಂಡ ಅಧ್ಯಯನ ನಡೆಸಲಿದೆ. 

ಕೂಡಿಗೆಯ ಸೈನಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಯಲ್ಲಿ ಉಂಟಾದ ಹಾನಿಯ ಬಗ್ಗೆ ಪಿಪಿಟಿ ಮುಖಾಂತರವಾಗಿ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೀಡಾದ ರಸ್ತೆ, ಸೇತುವೆ, ಅಂಗನವಾಡಿ ಕೇಂದ್ರಗಳು, ಶಾಲೆ ಮತ್ತು ಮನೆ ಹಾನಿಯ ಸಂಬಂಧ ಜಿಲ್ಲಾಧಿಕಾರಿಯವರು ಅಂಕಿ ಅಂಶ ಸಹಿತ ವರದಿ ನೀಡಿದರು. ಅಲ್ಲದೆ 2018 ರಿಂದ 2020 ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆ ಮತ್ತು ಅದರಿಂದ ಉಂಟಾದ ಹಾನಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಂಡ ಮುಂಜಾಗೃತ ಕ್ರಮಗಳು ಮತ್ತು ಪರಿಹಾರ ವಿತರಣೆಯ ಸಂಬಂಧ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.

ಮಡಿಕೇರಿ ತಾಲೂಕಿನ ಕಡಗದಾಳುವಿನ ಬೊಟ್ಲಪ್ಪ ಪೈಸಾರಿಗೆ ಭೇಟಿ ನೀಡಿದ ಕೇಂದ್ರ ತಂಡ ಅಲ್ಲಿನ ಭೂಕುಸಿತ ಪ್ರದೇಶ ಮತ್ತು ಬೆಳೆಹಾನಿ ಸ್ಥಳಗಳನ್ನು ಪರಿಶೀಲಿಸಿದರು. ಈ ಸಂದರ್ಭ ತೋಟದ ಮಾಲಕರಿಂದಲೇ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಭಾಗಮಂಡಲಕ್ಕೆ ತೆರಳಿದ ಕೇಂದ್ರ ತಂಡವು ಅಲ್ಲಿನ ಕಾಫಿ ಮತ್ತು ಕಾಳುಮೆಣಸು ಹಾನಿಯಾದ ಸ್ಥಳವನ್ನು ವೀಕ್ಷಿಸಿದರು. ಅಲ್ಲದೆ ಬೆಳೆ ಹಾನಿ ಸಂಬಂಧ ಜಮೀನಿನ ಮಾಲೀಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಗಜಗಿರಿ ಬೆಟ್ಟದಲ್ಲಿ ಭೂಕುಸಿತ ಉಂಟಾದ ಸ್ಥಳಕ್ಕೆ ತಂಡ ಭೇಟಿ ನೀಡಿತು. ಈ ಸಂದರ್ಭ ಜಿಲ್ಲಾಧಿಕಾರಿ ಅವರು ಆಗಸ್ಟ್ ಮೊದಲ ವಾರದಲ್ಲಿ ಇದ್ದ ಪರಿಸ್ಥಿತಿಯನ್ನು ಛಾಯಾಚಿತ್ರದ ಮೂಲಕ ಕೇಂದ್ರ ತಂಡಕ್ಕೆ ವಿವರಿಸಿದರು. ಬಳಿಕ ನಾರಾಯಣಾಚಾರ್ ಅವರ ಮನೆ ಇದ್ದ ಸ್ಥಳಕ್ಕೆ ತೆರಳಿ ಪರಿವೀಕ್ಷಣೆ ನಡೆಸಿದರು.

ಈ ಮಧ್ಯೆ ಭಾಗಮಂಡಲದ ಕೋರಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿರುವ ಶಾಲಾ ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲಿಸಿದರು. ಕೋರಂಗಾಲದ ರಸ್ತೆ ಹಾನಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜೊತೆಗೆ ಬಲ್ಲಮಾವಟಿ ಗ್ರಾ.ಪಂ.ವ್ಯಾಪ್ತಿಯ ದೊಡ್ಡ ಪುಲಿಕೋಟುವಿನ  ಹಾನಿಯಾದ ಅಂಗನವಾಡಿ  ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಣೆ ಮಾಡಿದರು.

ಜಿ.ಪಂ ಸಿ.ಇ.ಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ. ಇಒ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News