ಗಡಿನಾಡು ಮಕ್ಕಳಿಗೂ ವಿದ್ಯಾರ್ಥಿ ವೇತನ ಸಿಗಲಿ: ಟಿ.ಎಸ್.ನಾಗಾಭರಣ

Update: 2020-09-11 18:40 GMT

ಬೆಂಗಳೂರು, ಸೆ.11: ರಾಜ್ಯದೊಳಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಗಡಿಭಾಗದಲ್ಲಿ ಮತ್ತು ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಒತ್ತಾಯಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಆನ್‍ಲೈನ್ (ಜಾಲ ಸಂಪರ್ಕ ಸಭೆ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು, ದಿಲ್ಲಿ, ಮಹಾರಾಷ್ಟ್ರ ಇತ್ಯಾದಿ ರಾಜ್ಯದ ಗಡಿ ಹಾಗೂ ಹೊರನಾಡು ಭಾಗಗಳಲ್ಲಿ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ರಾಜ್ಯದೊಳಗೆ ಉನ್ನತ ಶಿಕ್ಷಣ ಪ್ರವೇಶಾತಿಯನ್ನು ಹಾಗೂ ವಿದ್ಯಾರ್ಥಿವೇತನ ನೀಡಲು ನಿರಾಕರಿಸಲಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಮತ್ತು ಹೊರರಾಜ್ಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕನ್ನಡದ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಹಾಯಧನ ನೀಡಲು ಇಲಾಖೆ ಮುಂದಾಗಬೇಕು ಎಂದು ಆಯುಕ್ತರಿಗೆ ಸೂಚಿಸಿದರು.

ಐಟಿಬಿಟಿ ಸೇರಿದಂತೆ ಶೇ.95ರಷ್ಟು ಉದ್ಯೋಗಗಳು ಖಾಸಗಿ ವಲಯದಲ್ಲಿದ್ದು, ಆ ಕ್ಷೇತ್ರಕ್ಕೆ ಗ್ರಾಮೀಣ ಮಕ್ಕಳು ಆಯ್ಕೆಯಾಗುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಆ ಕ್ಷೇತ್ರಕ್ಕೆ ಬೇಕಾದ ಜ್ಞಾನ, ಕೌಶಲಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ತಳಸಮುದಾಯದ ವಿದ್ಯಾರ್ಥಿಗಳು ಉನ್ನತಿ ಹೊಂದಲು ಸಹಕಾರಿಯಾಲಿದೆ ಎಂದರು.

ಇಲಾಖೆಯ ಜಾಲತಾಣದಲ್ಲಿ ಇ-ಪಾಸ್ ಇಂಗ್ಲಿಷಿನಲ್ಲಿದೆ ಹಾಗೂ ಕೆಲವು ಅಂತರ್ಜಾಲ ತಾಣದಲ್ಲಿ ತುಂಬುವ ಅರ್ಜಿಗಳು ಇಂಗ್ಲಿಷಿನಲ್ಲಿರುವುದನ್ನು ಗಮನಿಸಲಾಗಿದೆ. ಇದು ಎಸೆಸೆಲ್ಸಿ ಓದಿದ ಗ್ರಾಮೀಣ ಭಾಗದ ಮಕ್ಕಳಿಗೆ ಅರ್ಥ ಆಗುವುದಿಲ್ಲ. ಆಗ ಅವಕಾಶದಿಂದ ವಂಚಿತರಾಗುವ ಸಾಧ್ಯತೆಗಳಿರುವುದರಿಂದ ಕನ್ನಡದಲ್ಲೇ ಅರ್ಜಿ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಮತ್ತು ಕನ್ನಡಿಗರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಪಡೆದುಕೊಳ್ಳಲು ಬೇಕಾಗಿರುವ ಕೌಶಲ ತರಬೇತಿಯನ್ನು ನೀಡಬೇಕಿರುವುದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ ಅಧ್ಯಕ್ಷರು, ಇಲಾಖೆಯ ಜಾಲತಾಣದಲ್ಲಿ ಸಣ್ಣ-ಪುಟ್ಟ ದೋಷಗಳನ್ನು ಹೊರತುಪಡಿಸಿ, ಕನ್ನಡದಲ್ಲಿ ಆಡಳಿತ ನಡೆಸುತ್ತಿರುವುದಕ್ಕೆ ಅಭಿನಂದಿನೆ ಸಲ್ಲಿಸಿದರು.

ಹೊರನಾಡು, ಗಡಿನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಲಿನ ಸರಕಾರಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿವೇತನ ನೀಡುತ್ತಿಲ್ಲ. ಕರ್ನಾಟದಲ್ಲಿ ಅರ್ಜಿ ಸಲ್ಲಿಸಿದರೆ ಇಲ್ಲಿಯೂ ಅವರಿಗೆ ಹೊರ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಕಾರಣಕ್ಕೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ.

ಈ ಬಗ್ಗೆ ಪ್ರಾಧಿಕಾರದ ಸೂಚನೆಯನ್ವಯ ಹಿಂದುಳಿದ ವರ್ಗಗಳ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದ್ದು, ಮಕ್ಕಳಿಗೆ ಎರಡು ಕಡೆಯಿಂದಲೂ ಯಾವುದೇ ವಿದ್ಯಾರ್ಥಿವೇತನ ಸಿಗದೆ ಅನ್ಯಾಯವಾಗುತ್ತಿದೆ. ಹಾಗಾಗಿ ಅವರಿಗೆ ರಾಜ್ಯ ಸರಕಾರದಿಂದಲೇ ವಿದ್ಯಾರ್ಥಿವೇತನ ನೀಡಲು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಆಯುಕ್ತರಿಗೆ ಸೂಚಿಸಿದರು.

ಹೊರ ರಾಜ್ಯದಲ್ಲಿ 9 ಕನ್ನಡ ಅಧ್ಯಯನ ಪೀಠಗಳಿವೆ. ಅಲ್ಲಿ ವಿದ್ಯಾಭ್ಯಾಸ ಮಾಡಲು ಕರ್ನಾಟಕದ ವಿದ್ಯಾರ್ಥಿಗಳು ಹೋಗುತ್ತಾರೆ. ಅವರಿಗೂ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ಹೀಗಾದರೆ ಒಂದು ಕಣ್ಣಿಗೆ ಬೆಣ್ಣೆ; ಒಂದು ಕಣ್ಣಿಗೆ ಸುಣ್ಣ ಮಾಡಿದಂತಾಗುತ್ತದೆ. ಅವರು ನಮ್ಮ ಕನ್ನಡದ ಮಕ್ಕಳು ಎಂಬ ಸತ್ಯ ಅರಿತು ಅವರಿಗೆ ನಾವು ನ್ಯಾಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾದ ಟಿ.ಎಚ್.ಎಂ. ಕುಮಾರ್ ಮಾತನಾಡಿ, ಗಡಿಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಸಂಬಂಧ ಆರ್ಥಿಕ ಇಲಾಖೆ ಸಲ್ಲಿಸಲಾದ ಪ್ರಸ್ತಾವನೆ ತಿರಸ್ಕøತಗೊಂಡಿದ್ದು, ತಮ ಸಲಹೆ-ಸೂಚನೆ ಮೇರೆಗೆ ಮತ್ತೊಮ್ಮೆ ವಿಸ್ತೃತವಾದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಟಿ.ಎಚ್.ಎಂ. ಕುಮಾರ್, ಜಂಟಿ ನಿರ್ದೆಶಕ (ವಸತಿ ನಿಲಯ) ಜಿ. ಜಗದೀಶ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News