ಮಾಜಿ ಶಾಸಕ ಅಪ್ಪಾಜಿ ಗೌಡ ಸಾವಿನ ಬಗ್ಗೆ ಅನುಮಾನವಿದೆ: ಎಚ್.ಡಿ. ಕುಮಾರಸ್ವಾಮಿ

Update: 2020-09-13 10:19 GMT

ಶಿವಮೊಗ್ಗ : ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಆಗದವರು ಯಾರೋ ಅವರ ಸಾವಿಗೆ ಕಾರಣರಾಗಿರಬಹುದು. ಅವರ ಸಾವಿನ ಬಗ್ಗೆ ಅನುಮಾನವಿದೆ‌ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಭದ್ರಾವತಿಯಲ್ಲಿ ಮಾತನಾಡಿದ ಅವರು, ಅಪ್ಪಾಜಿ ಗೌಡ ಅವರ ಕುಟುಂಬದವರೇ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಖಾಸಗಿ ಆಸ್ಪತ್ರೆ ಯಲ್ಲಿ ಒಬ್ಬ ಜನಪ್ರತಿನಿಧಿಗೆ ವೆಂಟಿಲೇಟರ್ ಸಿಕ್ಕಿಲ್ಲ ಅಂದರೆ ಏನರ್ಥ ಎಂದರು.

ಅಪ್ಪಾಜಿ ಗೌಡ ಅವರಿಗೆ ಕೋವಿಡ್-19 ಸೋಂಕು ಇತ್ತು ಎನ್ನುತ್ತಿದ್ದಾರೆ. ಆದರೆ ಅವರ ಕುಟುಂಬದ ಯಾರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ. ಇದೆಲ್ಲವನ್ನೂ ನೋಡಿದರೆ ಅಪ್ಪಾಜಿ ಗೌಡ ಅವರ ಸಾವಿನ ಬಗ್ಗೆ ಅನುಮಾನ ಮೂಡುತ್ತಿದೆ ಎಂದರು.

ಅಪ್ಪಾಜಿ ಗೌಡ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಂದು ಬೆಳಗ್ಗೆ ಗೊತ್ತಾಗಿದ್ದರೆ ನಾನು ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಆದರೆ ಸಂಜೆ ವೇಳೆಗೆ ವಿಷಯ ತಿಳಿದಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಕರೆತರಲು ಆಗಲಿಲ್ಲ ಎಂದು ಹೇಳಿದರು.

ಡ್ರಗ್ಸ್ ಕುರಿತ ತನಿಖೆಗೂ ಝಮೀರ್ ಅಹ್ಮದ್ ಅವರ ಹೇಳಿಕೆಗೂ ಸಂಬಂಧವಿಲ್ಲ‌. ಡ್ರಗ್ಸ್ ಗೂ ನನ್ನ ಕೊಲಂಬೋ ಪ್ರವಾಸಕ್ಕೂ ಏನು ಸಂಬಂಧ ಎಂದು ಕುಮಾರಸ್ವಾಮಿ ಈ ಸಂದರ್ಭ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News